Home Uncategorized ಹಾಸನದಲ್ಲಿ ಚಿರತೆ ಬೇಟೆಯಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹಾಸನದಲ್ಲಿ ಚಿರತೆ ಬೇಟೆಯಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

8
0

ಹಾಸನ: ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷ ತಾರಕಕ್ಕೇರಿದೆ. ಮಲೆನಾಡಿನಲ್ಲಿ ಕಾಡಾನೆ ಜೊತೆಗೆ ಕಾಟಿ, ಕಾಡು ಹಂದಿಗಳು ರೈತರ ಬೆಳೆಗಳನ್ನ ದ್ವಂಸಮಾಡುವ ಜೊತೆಗೆ ಜನರ ಜೀವಕ್ಕೆ ಕಂಟಕ ತರುತ್ತಿದ್ದರೆ ಬಯಲು ಸೀಮೆ ಪ್ರದೇಶದಲ್ಲಿ ಹೆಚ್ಚಾಗಿರುವ ಚಿರತೆಗಳ ಹಾವಳಿ (Leopard menace)ಯಿಂದ ಜನರು ಜೀವಭಯದಿಂದ ಬದುಕುವ ಜೊತೆಗೆ ಜಾನುವಾರುಗಳನ್ನ ಕೊಂದು ತಿನ್ನುತ್ತಾ ದೊಡ್ಡ ನಷ್ಟ ತಂದೊಡ್ಡುತ್ತಿವೆ. ಹೆಚ್ಚಾಗಿರುವ ಚಿರತೆ ಹಾವಳಿಯನ್ನೇ ಕೆಲ ದುಷ್ಟರು ಬಂಡವಾಳ ಮಾಡಿಕೊಂಡಿದ್ದು ಚಿರತೆಗಳಿಗೆ ಉರುಳು ಹಾಕಿ ಕೊಂದು ಚರ್ಮ, ಉಗುರು, ಮೂಳೆಗಳನ್ನ ಮಾರಾಟ ಮಾಡುತ್ತಿರುವ ಬೃಹತ್ ಜಾಲವೊಂದನ್ನ ಹಾಸನ ಪೊಲೀಸರು ಬೇಧಿಸಿದ್ದಾರೆ. ರಾಜ್ಯ ಅಂತರಾಜ್ಯಗಳವರೆಗೂ ಹಬ್ಬಿರುವ ಕತರ್ನಾಕ್​ಗಳ ಜಾಲವನ್ನ ಜಾಲಾಡಿರುವ ಪೊಲೀಸರು ಐವರನ್ನ ಬಂದಿಸಿ ಚಿರತೆ ಉಗುರು, ಮೂಳೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎರಡು ದಶಕಗಳಿಂದ ಕಾಡಾನೆಗಳ ಕಾಟದಿಂದ ಕಾಫಿ ಬೆಳೆಗಾರರು ಬೇಸತ್ತು ಹೋಗಿದ್ದಾರೆ. ಕೋಟಿ ಕೋಟಿ ನಷ್ಟ ಒಂದೆಡೆಯಾದರೆ, ಅಮೂಲ್ಯ ಜೀವಗಳ ಬಲಿಯಿಂದ ಜನರು ಭಯಬೀತಿಯಿಂದ ದಿನ ಕಳೆಯುತ್ತಿದ್ದಾರೆ. ಆದರೆ ಇನ್ನೊಂದೆಡೆ ಜಿಲ್ಲೆಯ ಬಯಲು ಸೀಮೆಯಲ್ಲಿ ಹೆಚ್ಚಾಗಿರುವ ಚಿರತೆಗಳ ಹಾವಳಿ ಅಮಾಯಕ ಜನರ ನಿದ್ದೆಗೆಡಿಸಿದೆ. ಜಾನುವಾರುಗಳನ್ನ ಬೇಟೆಯಾಡುತ್ತಾ ತಿಂದು ಮುಕ್ಕುತ್ತಿರುವ ನರಭಕ್ಷಕ ಪಾಣಿಗಳು ಜನರಲ್ಲಿ ಜೀವ ಭಯವನ್ನೂ ಸೃಷ್ಟಿಮಾಡುತ್ತಿವೆ. ಆದರೆ ಹೀಗೆ ಹೆಚ್ಚಾಗಿರುವ ಚಿರತೆಗಳ ಸಂಖ್ಯೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಚಿರತೆಗಳನ್ನ ಕೊಂದು ಅದರ ಚರ್ಮ, ಮೂಳೆ, ಹಲ್ಲು, ಉಗುರು ಮಾರಾಟ ಮಾಡುತ್ತಿರುವ ದೊಡ್ಡ ಗುಂಪೊಂದನ್ನು ಹಾಸನ ಉಪವಿಭಾಗದ ಪೊಲೀಸರು ಬೇದಿಸಿದ್ದಾರೆ.

ಇದನ್ನೂ ಓದಿ: ಬ್ರಿಟಿಷ್ ಪ್ರೇಯಸಿಯನ್ನು ಕೊಂದ ಜರ್ಮನ್ ಬೌನ್ಸರ್ ಶಿಕ್ಷೆ ಪ್ರಮಾಣ ತಗ್ಗಿಸಲು ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತಗೊಂಡು ಶಿಕ್ಷಾವಧಿ ಇನ್ನಷ್ಟು ಹೆಚ್ಚಿತು!

ಡಿವೈಎಸ್​ಪಿ ಉದಯಭಾಸ್ಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎರಡು ಚಿರತೆಗಳನ್ನು ಕೊಂದು ಉಗುರು, ಹಲ್ಲು ಮಾರಾಟ ಮಾಡಲು ಮುಂದಾಗಿದ್ದ ಐವರು ಹಂತಕರನ್ನ ಬಂದಿಸಲಾಗಿದೆ. ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ರಾಶಿಗುಡ್ಡ ರಕ್ಷಿತ ಅರಣ್ಯದಿಂದ ಬಂದಿದ್ದ ಚಿರತೆ ಜಾನುವಾರುಗಳನ್ನ ಕೊಂದು ತಿನ್ನುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಹಾಗಾಗಿಯೇ ಚಿರತೆಗೆ ಉರಳು ಹಾಕಿದ್ದ ಇಲ್ಲಿನ ಕೋಮಾರನಹಳ್ಳಿಯ ರವಿ ಹಾಗೂ ಚಿಕ್ಕನಾಯಕನಹಳ್ಳಿಯ ಮೋಹನ್ ಚಿರತೆಯನ್ನ ಕೊಂದು ಉಗುರು, ಹಲ್ಲು, ಮೂಳೆಗಳನ್ನ ತೆಗೆದು ಎಟಿಎಂ ಸೆಕ್ಯುರಿಟಿಯಾಗಿದ್ದ ಅರಸೀಕೆರೆ ತಾಲ್ಲೂಕಿನ ಜಾವಗಲ್ ಮೂಲದ ಉಂಡಿಗನಾಳು ಗ್ರಾಮದ ಸ್ವಾಮಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನ ಬಂದಿಸಿದ್ದಾರೆ.

ಚಿರತೆಗಳು ಜಾನುವಾರುಗಳನ್ನ ಕೊಲ್ಲುತ್ತವೆ, ಹಾಗಾಗಿ ಚಿರತೆಗಳನ್ನ ಕೊಂದರೆ ಜನರಾರು ತಮ್ಮ ವಿರುದ್ಧ ಸಾಕ್ಷಿ ಹೇಳುವುದಿಲ್ಲ ಎಂದು ಭಾವಿಸಿಕೊಂಡ ಈ ಮೂವರು ಕತರ್ನಾಕ್ ಆರೋಪಿಗಳು ಚಿರತೆಯನ್ನ ಕೊಂದು ಚಿರತೆಯ ಉಗುರು ಹಲ್ಲು ಕಿತ್ತು ನಂತರ ಚಿರತೆಯನ್ನ ಹೂತು ಹಾಕಿದ್ದರು. ಚಿರತೆ ಕೊಳೆತ ಬಳಿಕ ಮೂಳೆಗಳನ್ನು ಕೂಡ ತೆಗೆದು ಅದನ್ನ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸುವ ಪ್ಲಾನ್ ಹಾಕಿದ್ದರು. ಆದರೆ ಪೊಲೀಸರಿಗೆ ಸಿಕ್ಕ ಮಾಹಿತಿ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿದ್ದಾರೆ.

ಇದನ್ನೂ ಓದಿ: ಬ್ರೆಜಿಲ್: ಸಾಮಾಜಿಕ ಜಾಲತಾಣಗಳ ಜನಪ್ರಿಯ ಇನ್​ಫ್ಲುಯೆನ್ಸರ್ ಸಂಬಂಧ ಮುರಿದಿದ್ದಕ್ಕೆ ಅವಳ ಮಾಜಿ ಸಂಗಾತಿ 30 ಬಾರಿ ಇರಿದು ಕೊಂದನೇ?

ಕಾಳ ಸಂತೆಯಲ್ಲಿ ವನ್ಯಜೀವಿಗಳ ಹಲ್ಲು, ಉಗುರು, ಮೂಳೆಗಳಿಗೆ ಒಳ್ಳೆ ಬೆಲೆಯಿದೆ ಎನ್ನುವ ಕಾರಣದಿಂದ ಹೀಗೆ ಹತ್ಯೆಮಾಡಿ ಮಾರಾಟ ಮಾಡುವ ದೊಡ್ಡ ಚಾಲವೇ ಇದರ ಹಿಂದೆ ಇರುವ ಬಗ್ಗೆ ಅನುಮಾನಗಳು ಮೂಡಿವೆ. ಈ ಚಿರತೆ ಹತ್ಯೆ ತನಿಖೆ ನಡೆಸುತ್ತಿರುವಾಗಲೇ ಜಿಲ್ಲೆಯ ಆಲೂರು ತಾಲ್ಲೂಕಿನ ಮಾದಿಹಳ್ಳಿಯಲ್ಲಿಯೂ ಒಂದು ಚಿರತೆಯನ್ನ ಕೊಂದು ಹಲ್ಲು, ಉಗುರು ಮಾರಾಟ ಮಾಡಲು ಯತ್ನಿಸಿದ್ದ ಮತ್ತಿಬ್ಬರು ಆರೋಪಿಗಳನ್ನ ಬಂದಿಸಲಾಗಿದೆ. ಮಾದಿಹಳ್ಳಿಯ ಮಂಜೇಗೌಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಲದ ರೇಣುಕುಮಾರ್ ಎಂಬ ಆರೋಪಿಗಳನ್ನ ಬಂದಿಸಲಾಗಿದೆ.

ಈ ಪ್ರಕರಣದಲ್ಲಿ ಚಿರತೆಯನ್ನ ಕೊಂದು ಚಿರತೆಯ ನಾಲ್ಕು ಕಾಲುಗಳನ್ನ ಕಡಿದು ಕಾಲುಗಳ ಸಮೇತವಾಗಿಯೇ ಮಾರಾಟ ಮಾಡಲು ಯತ್ನಿಸಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ದೊಡ್ಡ ದೊಡ್ಡ ಸ್ಟಾರ್​ಗಳು, ದೊಡ್ಡ ದೊಡ್ಡ ಶ್ರೀಮಂತರು ಇಂತಹ ವನ್ಯ ಜೀವಿಗಳ ಉಗುರು, ಹಲ್ಲುಗಳಿಂದ ಅಲಂಕಾರಿಕ ವಸ್ತುಮಾಡಿ ಧರಿಸುತ್ತಾರೆ ಎಂಬ ಕಾರಣದಿಂದಲೇ ಇಂತಹ ಪ್ರಕರಣಗಳು ನಡೆಯುತ್ತಿದ್ದು ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಿ ಇಡೀ ಜಾಲವನ್ನು ಬೇಧಿಸುವ ಬಗ್ಗೆ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದ್ದು, ನಿತ್ಯವೂ ಸಮಸ್ಯೆಯಲ್ಲಿರುವ ಜನರು ದಶಕಗಳಿಂದ ನೋವು ಹೇಳಿಕೊಳ್ಳುತ್ತಲೇ ಇದ್ದಾರೆ. ಆದರೆ ಇತ್ತ ಇದನ್ನೇ ಬಂಡವಾಳ ಮಾಡಿಕೊಂಡು ನಡೆಯುತ್ತಿರುವ ದೊಡ್ಡ ಜಾಲವೊಂದು ಸದ್ದಿಲ್ಲದೆ ವನ್ಯಜೀವಿಗಳನ್ನ ಕೊಂದು ಅವುಗಳ ಮೂಳೆ, ಹಲ್ಲು, ಉಗುರುಗಳನ್ನ ಮಾರಾಟ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದಾಗಲೇ ಜಿಲ್ಲೆಯಲ್ಲಿ ಎರಡು ಚಿರತೆ ಹತ್ಯೆ ಪ್ರಕರಣ ಬಯಲಾಗಿದ್ದು, ಸಮಗ್ರ ತನಿಖೆಯಿಂದಷ್ಟೇ ನಡೆದಿರುವ ಈ ಹತ್ಯೆಗಳ ಹಿಂದೆ ಯಾರಿದ್ದಾರೆ ಎನ್ನುವುದು ಬಯಲಾಗಲಿದೆ.

ವರದಿ: ಮಂಜುನಾಥ್ ಕೆ.ಬಿ, ಟಿವಿ9 ಹಾಸನ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here