ಬೆಂಗಳೂರು:
ನಗರದಲ್ಲಿ ಕೋವಿಡ್ ನಿಂದ ಸಾಕಷ್ಟು ಸವಾಲುಗಳನ್ನು ಎದುರಿಸಲಾಗಿದ್ದು, ವೈದ್ಯಕೀಯ ವ್ಯವಸ್ಥೆಯಲ್ಲಿ ವೈದ್ಯರು, ದಾದಿಯರು ಹಾಗೂ ಇನ್ನಿತರೆ ಸಿಬ್ಬಂದಿಯ ಕಾರ್ಯವೈಖರಿಯ ಜೊತೆಗೆ ಲಾಕ್ಡೌನ್ ಮಾಡಿದ್ದ ಹಿನ್ನೆಲೆ ಕೋವಿಡ್ ಸೊಂಕನ್ನು ಹತೋಟಿಗೆ ತರಲಾಗಿದೆ. ಈ ಸಂಬಂಧ ಕೋವಿಡ್ ನಿಯಂತ್ರಣದಲ್ಲಿರಬೇಕಾದರೆ ಎಲ್ಲಾ ನಾಗರೀಕರು ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸುವ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಮುಖ್ಯ ಆಯುಕ್ತರು ಗೌರವ್ ಗುಪ್ತ ರವರು ತಿಳಿಸಿದರು.
ಬಿಬಿಎಂಪಿ ಕೋವಿಡ್-19 ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಇಂದು ಟೌನ್ ಹಾಲ್ನಲ್ಲಿ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯಲ್ಲಿ 20,000 ಕೋವಿಡ್ ಪ್ರಕರಣಗಳು ಕಂಡುಬಂದಿತ್ತು. ಆದರೀಗ ಪ್ರತಿನಿತ್ಯ 600 ರಿಂದ 700 ಪ್ರಕರಣಗಳು ಮಾತ್ರ ಕಂಡುಬರುತ್ತಿವೆ. ಈ ಪೈಕಿ ಎಲ್ಲಾ ನಾಗರೀಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಿದಾಗ ಮಾತ್ರ ನಾವು ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ನಗರದಲ್ಲಿ ಎಲ್ಲಾ ವಹಿವಾಟುಗಳಿಗೆ ವಿನಾಯ್ತಿ ಸಿಗಲಿದ್ದು, ಪಾಲಿಕೆ ಮೇಲೆ ಹೆಚ್ಚು ಜವಾಬ್ದಾರಿ ಬರುತ್ತದೆ. ಈ ವೇಳೆ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿಬೇಕಾಗುತ್ತದೆ. ಮಾರ್ಷಲ್ಗಳು, ಹೋಮ್ ಗಾರ್ಡ್ ಗಳ ಜೊತೆಗೆ ಪೋಲೀಸ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರನೆ ನಡೆಸಿ ಕೊವಿಡ್ ನಿಯಮಗಳನ್ನು ಪಾಲಿಸಲು ನಾಗರಿಕರಿಗೆ ತಿಳುವಳಿಕೆ ನೀಡಬೇಕು. ಎಲ್ಲೆಲ್ಲಿ ಕೋವಿಡ್ ನಿಯಮಗಳು ಪಾಲಿಸುತ್ತಿಲ್ಲ ಅಲ್ಲಿ ದಂಡ ವಿಧಿಸುವ ಕೆಲಸ ಆಗಬೇಕು ಎಂದು ಹೇಳಿದರು.

ನಗರದ ಸಾರ್ವಜನಿಕ ಸ್ಥಳ, ವಹಿವಾಟು ನಡೆಯುವ ಸ್ಥಳ, ಮದುವೆ ಸಮಾರಂಭ, ಮಾರುಕಟ್ಟೆ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕೋವಿಡ್ ನಿಯಮಗಳನ್ನು ಪಾಲಿಸಿದಾಗ ಮಾತ್ರ ಎಲ್ಲರೂ ಸುರಕ್ಷಿತವಾಗಿರಲು ಸಾಧ್ಯ ಎಂದು ತಿಳಿಸಿದರು.
ಕೋವಿಡ್ ನಿಯಮಗಳಾದ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ಮೇಲೆ ದಂಡ ವಿಧಿಸುವ ಸಲುವಾಗಿ 54 ತಂಡಗಳನ್ನು ರಚನೆ ಮಾಡಲಾಗಿದ್ದು, ಒಂದು ತಂಡದಲ್ಲಿ 4 ಜನ ಮಾರ್ಷಲ್ಗಳಿರುತ್ತಾರೆ. ಅವರು ಹೆಚ್ಚು ಜನದಟ್ಟಣೆಯಿರುವ ಸ್ಥಳಗಳಿಗೆ ತೆರಳಿ ನಿಯಂತ್ರಣ ಮಾಡುತ್ತಾರೆ. ಅಲ್ಲದೆ ಕೋವಿಡ್ ನಿಯಮಗಳನ್ನು ಪಾಲಿಸದೆ ಹೆಚ್ಚು ಉಲ್ಲಂಘನೆಯಾಗುವ ಸ್ಥಳಗಳಲ್ಲಿ ವಲಯ ಹಿರಿಯ ಅಧಿಕಾರಿಗಳು, ಆರೋಗ್ಯಾಧಿಕಾರಿ, ಆರೋಗ್ಯವೈದ್ಯಾಧಿಕಾರಿಗಳ ತಂಡವು ಸ್ಥಳ ಪರಿಶೀಲನೆ ನಡೆಸಿ ನೋಟೀಸ್ ನೀಡಿ ಬೀಗಮುದ್ರೆ ಹಾಕುವ ಕೆಲಸ ಮಾಡಿದಾಗ ನಾಗರೀಕರು ಕೋವಿಡ್ ನಿಯಮಗಳನ್ನು ಪಾಲಿಸುತ್ತಾರೆ ಎಂದರು.
ಪಾದಚಾರಿ ಮಾರ್ಗಗಳ ತೆರವು ಕಾರ್ಯಾಚರಣೆ ನಡೆಯಬೇಕು:
ಬಿಬಿಂಪಿ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದ ರೀತಿ ಸುಗಮ ಸಂಚಾರಕ್ಕೆ ಅವಕಾಶವಿರಬೇಕು. ಆದರೆ, ನಗರದ ಬಹುತೇಕ ಕಡೆ ಪಾದಚಾರಿ ಮಾರ್ಗಗಳಲ್ಲಿ ವಾಹನಗಳ ಪಾರ್ಕಿಂಗ್, ತಳ್ಳುವ ಗಾಡಿಗಳ ಮೂಲಕ ವ್ಯಾಪಾರ, ಕಟ್ಟಡ ನಿರ್ಮಾಣ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳ ಜೊತೆಗೆ ಪೊಲೀಸ್ ಸಿಬ್ಬಂದಿ ಸಹಕರಿಸಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಆಗಬೇಕಿದೆ ಎಂದರು. ಅದಕ್ಕೆ ನಗರ ಪೋಲೀಸ್ ಆಯುಕ್ತರು ಪ್ರತಿಕ್ರಿಯಿಸಿ, ಪೊಲೀಸ್ ಸಿಬ್ಬಂದಿಗಳು ಹಲವು ಕಡೆ ಪಾದಚಾರಿ ಮಾರ್ಗಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದಲ್ಲದೆ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರನೆಗೆ ಪಾಲಿಕೆಯ ಜೊತೆಗೆ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತರು ಕಮಲ್ ಪಂಥ್ ಮಾತನಾಡಿ, ನಗರದಲ್ಲಿ ಕೋವಿಡ್ ಸೋಂಕು ತಡೆಯಲು ಹಲವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ಮಾರ್ಷಲ್ಗಳು ದಂಡ ವಿಧಿಸುವ ವೇಳೆ ವಾಗ್ವಾದ/ಹಲ್ಲೆ ನಡೆದರೆ, ಪೊಲೀಸ್ ಸಿಬ್ಬಂದಿಯು ಭದ್ರತೆ ಕಲ್ಪಿಸುವ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಜಾರಿ ತರುವಾಗ ನಾಗರೀಕರ ಜೊತೆ ವಾಗ್ವಾದ ಆಗುತ್ತದೆ, ಆಗ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಮಾರ್ಷಲ್ಗಳ ಜೊತೆ ಪೊಲೀಸ್ ಸಿಬ್ಬಂದಿಯು ಕೈಜೋಡಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಕೋವಿಡ್ ಸೋಂಕು ಇನ್ನು ಹಾಗೆಯೇ ಇದೆ. ಆದ್ದರಿಂದ ಎಲ್ಲಾ ನಾಗರೀಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಮುಂದಿನ ದಿನಗಲ್ಲಿ ಪೊಲೀಸ್ ಇಲಾಖೆಯಿಂದ ಪಾಲಿಕೆಗೆ ಬೇಕಾದಂತಹ ಸಹಕಾರ ನಿಡಲಾಗುವುದು. ಎಲ್ಲಾದರೂ ಕೋವಿಡ್ ನಿಯಮಗಳು ಉಲ್ಲಂಘನೆಯಾದರೆ ಅಥವಾ ಮಾರ್ಷಲ್ಗಳ ಮೇಲೆ ನಾಗರೀಕರು ಹಲ್ಲೆ ಮಾಡಿದಾರೆ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತರು (ಘನತ್ಯಾಜ್ಯ) ಡಾ. ಹರೀಶ್ ಕುಮಾರ್, ವಿಶೇಷ ಆಯುಕ್ತರು(ಆರೋಗ್ಯ) ಡಿ. ರಂದೀಪ್, ಹೆಚ್ಚುವರಿ ಪೊಲೀಸ್ ಯುಕ್ತರು ಮುರುಗನ್, ಜಂಟಿ ಆಯುಕ್ತರು(ಘನತ್ಯಾಜ್ಯ) ಸರ್ಫರಾಜ್ ಖಾನ್, ಎಲ್ಲಾ ವಲಯ ಜಂಟಿ ಆಯುಕ್ತರು ಮತ್ತು ಮುಖ್ಯ ಇಂಜಿನಿಯರ್ಗಳು, ಮಾರ್ಷಲ್ ಮೇಲ್ವಿಚಾರಕರು, ಮಾರ್ಷಲ್ಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.