ಬೆಂಗಳೂರು:
ನಿದ್ದೆ ಮಾತ್ರೆ ಸೇರಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರು ಸೋಮವಾರ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ಸಂಬಂಧಿಕರ ಮದುವೆಯೊಂದರಲ್ಲಿ ಭಾಗಿಯಾಗಿದ್ದು, ಊಟದಲ್ಲಿ ಅಜೀರ್ಣವಾಗಿತ್ತು. ಹೀಗಾಗಿ ಮಾತ್ರೆ ನುಂಗಿದ್ದು, ಡೋಸ್ ಹೆಚ್ಚಾಗಿದೆ ಅಷ್ಟೇ. ಇದೊಂದು ಅಚಾತುರ್ಯದ, ಆಕಸ್ಮಿಕ ಘಟನೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನನಗೆ ಯಾವುದೇ ರೀತಿಯಲ್ಲಿ ಒತ್ತಡವಿರಲಿಲ್ಲ. ರಾಜಕೀಯ ಒತ್ತಡ ಯಾವಾಗಲೂ ಇರುತ್ತದೆ. ಆದರೆ, ಆತ್ಮಹತ್ಯೆಗೆ ಯತ್ನಿಸುವಂತಹ ವ್ಯಕ್ತಿಯೂ ನಾನಲ್ಲ ಎಂದರು.
ಉಪಚುನಾವಣೆಯ ಸೋಲಿನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತಿಗೆಟ್ಟಿರಬೇಕು. ಅವರು ಈ ಮೊದಲೂ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ತಮಗೆ ಸ್ವಲ್ಪ ಅಜೀರ್ಣವಾಗಿದ್ದ ಹಿನ್ನೆಲೆಯಲ್ಲಿ ಮಾತ್ರೆ ಬದಲಾಗಿ ನಿದ್ದೆ ಮಾತ್ರೆ ನುಂಗಿದ್ದೆ. ಆಗಾಗ ನಿದ್ದೆ ಬರದಿದ್ದಾಗ ತಮಗೆ ನಿದ್ದೆ ಮಾತ್ರೆ ಸೇವಿಸುವ ಅಭ್ಯಾಸವಿದೆ. ಯಾವಾಗಲೂ ಅರ್ಧ ಮಾತ್ರೆ ಸೇವಿಸುತ್ತಿದ್ದೆ. ಆದರೆ, ಮೊನ್ನೆ ಇಡೀ ಮಾತ್ರೆ ಸೇವಿಸಿದ್ದೆ. ಹಾಗಾಗಿ ಅಸ್ವಸ್ಥಗೊಂಡಿದ್ದೆ. ಒಂದೆರಡು ದಿನ ವಿಶ್ರಾಂತಿ ಪಡೆದು ಬಳಿಕ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ ಎಂದು ಅವರು ತಿಳಿಸಿದರು.