ಉತ್ತರಾಖಂಡ: 2014ರಲ್ಲಿ ಉತ್ತರಾಖಂಡದ ಯುಎಸ್ ಜಿಲ್ಲೆಯಲ್ಲಿ ದಾಳಿಕೋರರಿಂದ ಆಸಿಡ್ ದಾಳಿಯಿಂದ ಬದುಕುಳಿದವರಿಗೆ 35 ಲಕ್ಷ ರೂ. ಪರಿಹಾರ ನೀಡುವಂತೆ ಉತ್ತರಾಖಂಡ (Uttarakhand) ಹೈಕೋರ್ಟ್ (High Court) ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 2019ರಲ್ಲಿ ಅರ್ಜಿ ಸಲ್ಲಿಸಿದ್ದ ಆಸಿಡ್ ದಾಳಿ ಸಂತ್ರಸ್ತೆ ಗುಲ್ನಾಜ್ ಖಾನ್ ಅವರ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂಜಯ್ ಕುಮಾರ್ ಮಿಶ್ರಾ ಅವರ ಏಕ ಪೀಠ ಈ ಆದೇಶ ನೀಡಿದೆ.
ಆಸಿಡ್ ದಾಳಿಯಿಂದ ಬದುಕುಳಿದ ಗುಲ್ನಾಜ್ ಖಾನ್ 2014ರಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಎಂದು ಅರ್ಜಿದಾರರ ವಕೀಲರಾದ ಸ್ನಿಗ್ಧಾ ತಿವಾರಿ ಹೇಳಿದರು. ಗುಲ್ನಾಜ್ ಖಾನ್ ಶಾಲೆಗೆ ಹೋಗುವ ಸಮಯದಲ್ಲಿ, ಅಪರಿಚಿತ ವ್ಯಕ್ತಿ, ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ, ಆದರೆ ಈ ಬೇಡಿಕೆಯನ್ನು ಆಕೆ ತಿರಸ್ಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆ ವ್ಯಕ್ತಿ ಆಕೆಯ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಆಕೆಯ ದೇಹದ 60%ದಷ್ಟು ಭಾಗಗಳಲ್ಲಿ ಸುಟ್ಟಗಾಯಗಳಾಗಿವೆ. ಅವಳ ಬಲ ಕಿವಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ಇದನ್ನು ಓದಿ: ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಲು ಆ್ಯಸಿಡ್ ಖರೀದಿಸಿದ್ದು ಆನ್ಲೈನ್ನಲ್ಲಿ; ಫ್ಲಿಪ್ಕಾರ್ಟ್, ಅಮೆಜಾನ್ಗೆ ನೋಟಿಸ್
ಆಕೆಯ ಇನ್ನೊಂದು ಕಿವಿಯಲ್ಲಿ 50 ಪ್ರತಿಶತದಷ್ಟು ಸುಟ್ಟು ಹೋಗಿದೆ ಮತ್ತು ಆಕೆಯ ಮುಖ, ಎದೆ ಮತ್ತು ಕೈಗಳ ಮೇಲೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಗುಲ್ನಾಜ್ ಖಾನ್ ತನ್ನ ಅರ್ಜಿಯಲ್ಲಿ ರಾಜ್ಯ ಸರ್ಕಾರವು ತನ್ನ ಸುರಕ್ಷತೆ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಎತ್ತಿಹಿಡಿಯಲು ವಿಫಲವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವು ರಾಜಕೀಯ ವಿಷಯಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿರುವಾಗ ನಮ್ಮಂತಹ ಜನರಿಗೆ ಸರಿಯಾದ ಪರಿಹಾರವನ್ನು ನೀಡಲಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಕೀಲರು ಕೂಡ ವಾದಿಸಿದ್ದಾರೆ. ವಾದಗಳನ್ನು ಆಲಿಸಿದ ನಂತರ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮಿಶ್ರಾ ಅವರ ಏಕ ಪೀಠವು ಶುಕ್ರವಾರ ಈ ಪ್ರಕರಣದಲ್ಲಿ ಆಸಿಡ್ ದಾಳಿಯಿಂದ ಬದುಕುಳಿದವರಿಗೆ 35,00,000 ಪರಿಹಾರವನ್ನು ನೀಡುವಂತೆ ಆದೇಶ ನೀಡಿದೆ.
ಆಕೆಗೆ ಉತ್ತರಾಖಂಡ ರಾಜ್ಯದ ಒಳಗೆ ಮತ್ತು ಹೊರಗಿರುವ ಯಾವುದೇ ಇತರ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆಯನ್ನು ನಡೆಸಲಾಗಿದ್ದರೂ ಅದರ ಹಣವನ್ನು ರಾಜ್ಯ ಸರ್ಕಾರವು ನೀಡುತ್ತದೆ. ಇಂತಹ ಘೋರ ಅಪರಾಧಗಳಿಗೆ ಬಲಿಯಾದ ಅನೇಕ ಮಹಿಳೆಯರಿಗೆ ಇದು ಭರವಸೆಯ ತರುತ್ತದೆ, ಎಂದು ಅವರು ಹೇಳಿದರು.
ಜೂನ್ 2017ರಲ್ಲಿ, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಉತ್ತರಾಖಂಡ ರಾಜ್ಯದಾದ್ಯಂತ ಇರುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಆಸಿಡ್ ದಾಳಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವಂತೆ ನಿರ್ದೇಶಿಸಲಾಗಿದೆ. ಸಂತ್ರಸ್ತರಿಗೆ ಉಚಿತ ವೈದ್ಯಕೀಯ ನೆರವು ನೀಡಲು ರಾಜ್ಯ ಸರ್ಕಾರಕ್ಕೆ ಮತ್ತಷ್ಟು ನಿರ್ದೇಶನ ನೀಡಲಾಗಿದೆ. ಆ್ಯಸಿಡ್ ದಾಳಿಯಿಂದ ಬದುಕುಳಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಗಾಗಿ ದೈಹಿಕ ವಿಕಲಚೇತನರ ವರ್ಗಕ್ಕೆ ಸೇರಿಸಲು ಮತ್ತು ಅವರ ಪುನರ್ವಸತಿಗಾಗಿ ಪ್ರತ್ಯೇಕ ಯೋಜನೆ ರೂಪಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
2017 ರಲ್ಲಿ, ಉಧಮ್ ಸಿಂಗ್ ನಗರ ಜಿಲ್ಲೆಯ 35 ವರ್ಷದ ಪರ್ವೀನ್ ಎಂಬ ಮಹಿಳೆ ಮೇಲೆ ಆಕೆ ಪತಿ ಆಸಿಡ್ ದಾಳಿ ನಡೆಸಿದ್ದರು. ಸೆಪ್ಟೆಂಬರ್ 2018 ರಲ್ಲಿ, ಅಲ್ಮೋರಾದಲ್ಲಿ ಒಂದೇ ಕುಟುಂಬದ ಏಳು ವ್ಯಕ್ತಿಗಳು ಆಸಿಡ್ ದಾಳಿಗೆ ಒಳಗಾಗಿದ್ದರು. ಈ ದಾಳಿಯಿಂದ ಬದುಕುಳಿದವರಲ್ಲಿ ಒಬ್ಬರು ನವೆಂಬರ್ 2018 ರಲ್ಲಿ ಸಾವನ್ನಪ್ಪಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ