Bengaluru drug racket: ಬೆಂಗಳೂರು ಡ್ರಗ್ಸ್ ದಂಧೆ: ಚಾಮರಾಜಪೇಟೆ ಇನ್ಸ್ಪೆಕ್ಟರ್ ಸೇರಿ 11 ಪೊಲೀಸ್ ಸಿಬ್ಬಂದಿ ಅಮಾನತು
ಬೆಂಗಳೂರು, ಸೆಪ್ಟೆಂಬರ್ 13: ನಗರದಲ್ಲಿ ಕಾನೂನು ರಕ್ಷಕರೇ ಡ್ರಗ್ ಪೆಡ್ಲರ್ಗಳ ಜೊತೆ ಕೈಜೋಡಿಸಿರುವುದು ಬೆಳಕಿಗೆ ಬಂದು ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಟಿ. ಮಂಜಣ್ಣ ಸೇರಿದಂತೆ 11 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಆಗಸ್ಟ್ 22ರಂದು ಆರ್.ಆರ್.ನಗರ ಪೊಲೀಸ್ ವ್ಯಾಪ್ತಿಯಲ್ಲಿ ಆರು ಪೆಡ್ಲರ್ಗಳ ಬಂಧನ ನಡೆದಿತ್ತು. ಆರೋಪಿಗಳಿಂದ 1,000 ಟೈಡಲ್ 100 ಮಾತ್ರೆಗಳು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಗಳ ಮೊಬೈಲ್ ಫೋನ್ಗಳನ್ನು ಪರಿಶೀಲಿಸಿದಾಗ, ಪೊಲೀಸರು ನಿರಂತರ ಸಂಪರ್ಕದಲ್ಲಿದ್ದು, ಹಣಕಾಸು ವ್ಯವಹಾರಗಳೂ ನಡೆದಿರುವುದು ಪತ್ತೆಯಾಗಿದೆ.

ಅಮಾನತು ಪಟ್ಟಿಯಲ್ಲಿ ಚಾಮರಾಜಪೇಟೆ ಠಾಣೆಯ ಏಳು ಸಿಬ್ಬಂದಿ ಮತ್ತು ಜೆ.ಜೆ.ನಗರ ಠಾಣೆಯ ನಾಲ್ವರು ಸಿಬ್ಬಂದಿ ಸೇರಿದ್ದಾರೆ. ಇವರು ಮಾದಕ ವಸ್ತು ಪೆಡ್ಲರ್ಗಳಿಗೆ ಬೆಂಬಲ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯೇ ಗಂಭೀರ ಕ್ರಮ ಕೈಗೊಂಡಿದೆ.
ತನಿಖೆಯನ್ನು ಎಸಿಬಿ ಅಧಿಕಾರಿ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ ಪೊಲೀಸರೇ ಪೆಡ್ಲರ್ಗಳಿಗೆ ಸಹಾಯ ಮಾಡಿರುವುದರಿಂದ, ಮಾದಕ ವಸ್ತು ಮಾರಾಟಕ್ಕೆ ರಕ್ಷಣೆಯೇ ಸಿಕ್ಕಂತಾಗಿದೆ.
ಈ ಬೆಳವಣಿಗೆ ನಗರದಲ್ಲಿ ವ್ಯಾಪಕ ಆಕ್ರೋಶ ಹುಟ್ಟಿಸಿದೆ. ರಕ್ಷಕರೇ ಭಕ್ಷಕರಾದರೆ ಜನರು ಯಾರನ್ನು ನಂಬಬೇಕು? ಎಂಬ ಪ್ರಶ್ನೆ ನಾಗರಿಕರ ಮನಸ್ಸನ್ನು ಕಾಡುತ್ತಿದೆ. ತಜ್ಞರು ಇಂತಹ ಪ್ರಕರಣಗಳು ಯುವಜನಾಂಗದ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
