ಬೆಂಗಳೂರು:
ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿನ ಈಜಿಪುರ ಮುಖ್ಯರಸ್ತೆ-ಒಳವರ್ತುಲ ರಸ್ತೆ ಜಂಕ್ಷನ್ನಿಂದ ಕೇಂದ್ರೀಯ ಸದನ ಜಂಕ್ಷನ್ವರೆಗೆ ಕೈಗೊಂಡಿದ್ದ 2.5 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ರದ್ದುಪಡಿಸಿ ಸರಕಾರ ಆದೇಶ ಹೊರಡಿಸಿದೆ.
ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗೆ ನೀಡಲಾಗಿತ್ತು. ಕಾರ್ಯಾದೇಶದನ್ವಯ 2017ರ ಮೇ 4ರಂದು ಆರಂಭವಾದ ಕಾಮಗಾರಿಯು 2019ರ ನ. 4ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಶುರುವಾಗಿ 4 ವರ್ಷ 9 ತಿಂಗಳು ಕಳೆದರೂ ಅರ್ಧದಷ್ಟು ಸಹ ಕೆಲಸ ಆಗಿಲ್ಲ. ಹೀಗಾಗಿ, ಸಿಂಪ್ಲೆಕ್ಸ್ ಕಂಪೆನಿಗೆ ನೀಡಿದ್ದ ಟೆಂಡರ್ ರದ್ದುಪಡಿಸಿ ನಗರಾಭಿವೃದ್ಧಿ ಇಲಾಖೆಯು ಮಾ. 3ರಂದು ಆದೇಶಿಸಿದೆ.
Also Read: Karnataka govt cancels Ejipura flyover tender
ಸಂಸ್ಥೆ ಸಲ್ಲಿಸಿರುವ 10.16 ಕೋಟಿ ರೂ. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು, ಗುತ್ತಿಗೆ ರದ್ದುಪಡಿಸಲು ಹಾಗೂ ನಿಯಮಾನುಸಾರ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಪ್ರಕ್ರಿಯೆ ಕೈಗೊಳ್ಳಲು ಅನುಮೋದನೆ ಕೋರಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಜ. 13ರಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ಆದಿನಾರಾಯಣಶೆಟ್ಟಿ ಎಂಬುವವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ವಾರದೊಳಗೆ ಗುತ್ತಿಗೆ ರದ್ದುಪಡಿಸಿ, ಬಾಕಿ ಕಾಮಗಾರಿ ಪೂರ್ಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಬೇಕೆಂದು ಫೆ. 17ರಂದು ತೀರ್ಪು ನೀಡಿತ್ತು.
ಪಾಲಿಕೆ ಮುಖ್ಯ ಆಯುಕ್ತರ ಪ್ರಸ್ತಾವನೆ ಮತ್ತು ಹೈಕೋರ್ಟ್ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದ ನಗರಾಭಿವೃದ್ಧಿ ಇಲಾಖೆ, ಸಿಂಪ್ಲೆಕ್ಸ್ ಕಂಪೆನಿ ಸಲ್ಲಿಸಿದ್ದ 10.16 ಕೋಟಿ ರೂ. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು, ಗುತ್ತಿಗೆ ರದ್ದುಪಡಿಸಲು ಅನುಮೋದನೆ ನೀಡಿದೆ. ಉದ್ದೇಶಿತ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಅನುಮೋದಿತ ಮೊತ್ತದ ಮಿತಿಯಲ್ಲಿಯೇ ಕೆಟಿಪಿಪಿ ಕಾಯಿದೆ ಅನ್ವಯ ಟೆಂಡರ್ ಆಹ್ವಾನಿಸಬೇಕೆಂದು ಸೂಚಿಸಿದೆ.