ಬೆಂಗಳೂರು:
ಹಾಸ್ಟೆಲ್ಗಳು ಹಾಗೂ ಕ್ಲಸ್ಟರ್ಗಳಲ್ಲಿ ಕೋವಿಡ್ ನಿರ್ವಹಣೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಕೋವಿಡ್ ಹಾಗೂ ಒಮಿಕ್ರಾನ್ಗೆ ಸಂಬಂಧಿಸಿದಂತೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕೋವಿಡ್ ತಜ್ಞರ ಸಮಿತಿಯಿಂದ ಪ್ರಸ್ತುತ ಕೋವಿಡ್ ಸ್ಥಿತಿಗತಿ ಹಾಗೂ ಹೊಸ ತಳಿ ಒಮಿಕ್ರಾನ್ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಈಗಿರುವ ಪಾಸಿಟವಿಟಿ ದರ ಪರಿಶೀಲಿಸಿದರೆ ಆತಂಕ ಪಡುವ ಅಗ್ಯವಿಲ್ಲ, ಆದಾಗ್ಯೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಹಾಸ್ಟೆಲ್ಗಳನ್ನು ಸ್ಯಾನಿಟೈಸ್ ಮಾಡುವುದು, ಊಟವನ್ನು ಪಾಳಿಯ ಮೇಲೆ ನೀಡುವುದು, ಕಡಿಮೆ ಮಾಡುವುದು, ಅಡುಗೆ ಸಿಬ್ಬಂದಿಗಳಿಗೆ ಎರಡೂ ಡೋಸ್ ಕಡ್ಡಾಯಗೊಳಿಸುವುದು, ಐಸೋಲೋಷನ್ ಕೊಠಡಿ ಬಗ್ಗೆ ವಿಶೇಷವಾದ ಮಾರ್ಗಸೂಚಿಗಳು ಹಾಗೂ ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಕ್ಲಸ್ಟರ್ ನಿರ್ವಹಣೆಗೂ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಲಸಿಕೆ ಅಭಿಯಾನ : ಲಸಿಕೆ ಅಭಿಯಾನಗಳನ್ನು ಪುನ: ಆಯೋಜಿಸಲು ಸಚಿವರು ಸಲಹೆ ನೀಡಿದ್ದು, ಈ ಬಗ್ಗೆ ಶೀಘ್ರದಲ್ಲಿ ಕ್ರಮಕೈಗೊಳ್ಳಲಾಗುವುದು. ಗಡಿಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಮಾರ್ಗಸೂಚಿಗಳನ್ನು ಮುಂದುವರೆಸಲಾಗುವುದು. ಕೇರಳ ವಿದ್ಯಾರ್ಥಿಗಳಿಗೆ ಎರಡು ಡೋಸ್, ಆರ್ಟಿಸಿಪಿಆರ್ ಪರೀಕ್ಷೆ ಸೇರಿದಂತೆ ನಿಯಮಗಳ ಕಡ್ಡಾಯ ಪರಿಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾತ್ರಿ ಕಫ್ರ್ಯೂ, ಕ್ರಿಸ್ಮಸ್, ಹೊಸ ವರ್ಷದ ಆಚರಣೆ ಬಗ್ಗೆ ಮುಂದಿನ ವಾರದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.