Home ಬೆಂಗಳೂರು ನಗರ ಕೇಂದ್ರದಿಂದ ಎಸ್‌ಸಿ ಮಕ್ಕಳಿಗೆ ಸ್ಕಾಲರ್‌ಶಿಪ್ ವರದಾನ

ಕೇಂದ್ರದಿಂದ ಎಸ್‌ಸಿ ಮಕ್ಕಳಿಗೆ ಸ್ಕಾಲರ್‌ಶಿಪ್ ವರದಾನ

59
0

ರಾಜ್ಯ ಎಸ್.ಸಿ.ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು:

ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ 59,048 ಕೋಟಿ ರೂಪಾಯಿ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು ಇದು ಬಡ ವಿದ್ಯಾರ್ಥಿಗಳಿಗೆ ವರದಾನದಂತೆ ಕಾರ್ಯ ನಿರ್ವಹಿಸಲಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಎಸ್.ಸಿ.ಮೋರ್ಚಾ ಅಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಈ ಕ್ರಮವು ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಅನುದಾನವು ಪ್ರತಿವರ್ಷ ಶೇ 5ರಷ್ಟು ಹೆಚ್ಚಳವಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಕೋಟಿಗೂ ಅಧಿಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದ್ದು, ಸಾಮಾಜಿಕ ಸಮಾನತೆಯ ಕನಸು ನನಸಾಗಲು ಮಹೋನ್ನತ ಕೊಡುಗೆ ನೀಡಲಿದೆ. 2020-21ರಲ್ಲಿ ಕರ್ನಾಟಕಕ್ಕೆ 179.3 ಕೋಟಿ, ಬಳಿಕ ಪ್ರತಿವರ್ಷ ಶೇ 5ರಷ್ಟು ಹೆಚ್ಚುತ್ತಾ ಹೋಗಿ 2025-26ರಲ್ಲಿ 314.79 ಕೋಟಿ ರಾಜ್ಯಕ್ಕೆ ಸಿಗಲಿದೆ. ಒಟ್ಟು 1,578 ಕೋಟಿ ರೂಪಾಯಿ ರಾಜ್ಯಕ್ಕೆ ಹರಿದುಬರಲಿದೆ. ರಾಜ್ಯ ಸರಕಾರವು ಇದಕ್ಕೆ ಪೂರಕವಾಗಿ ಶೇ 40ರಷ್ಟು ಅನುದಾನ ಕೊಡಲಿದೆ ಎಂದರು.

ಹಿಂದೆ ವಿದ್ಯಾರ್ಥಿಗಳು ಸರ್ಟಿಫಿಕೇಟ್ ಕೊಡಬೇಕಿತ್ತು. ಕಾಲೇಜಿನಲ್ಲಿ ಪ್ರವೇಶಾತಿ ವೇಳೆಯೇ ಬ್ಯಾಂಕ್ ಮತ್ತಿತರ ಮಾಹಿತಿಗಳ ಕ್ರೋಡೀಕರಣ ನಡೆಯಲಿದೆ. ಮಧ್ಯವರ್ತಿಗಳ ಸಮಸ್ಯೆ ಇಲ್ಲದೆ, ಯಾವುದೇ ತೊಡಕಿಲ್ಲದೆ ವಿದ್ಯಾರ್ಥಿವೇತನ ಲಭಿಸಲಿದೆ ಎಂದರು.

ಹಿಂದೆ ದಲಿತರು ಬಿಜೆಪಿಯಿಂದ ದೂರ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು. ಈಗ ದಲಿತರು ಸಂಪೂರ್ಣವಾಗಿ ಬಿಜೆಪಿ ಕಡೆ ಬಂದಿದ್ದಾರೆ. ಇದನ್ನು ಮಾನ್ಯ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ದಲಿತರು ದೂರ ಹೋದುದೇ ನನ್ನ ಸೋಲಿಗೆ ಮತ್ತು ಅಧಿಕಾರ ಕಳೆದುಕೊಳ್ಳಲು ಕಾರಣ ಎಂದು ಅವರು ತಿಳಿಸಿದ್ದಾರೆ ಎಂದರು.

ಹಳ್ಳಿಹಳ್ಳಿಗಳಲ್ಲೂ ಈಗ ಕಮಲ ಅರಳಿದೆ. ನಮ್ಮ ಬೆಂಬಲಿತ ಅಭ್ಯರ್ಥಿಗಳು ಪಕ್ಷ ಗೆದ್ದಿದೆ. ಕಾಂಗ್ರೆಸ್ ಬಿದ್ದಿದೆ. ಇದು ಎಲ್ಲರಿಗೂ ಗೊತ್ತಾಗಿದೆ. ಇದಕ್ಕಾಗಿ ಬಿಜೆಪಿ ಪರವಾಗಿ ಅಭಿನಂದಿಸುತ್ತೇವೆ. ಜನವರಿ 15ರಿಂದ ನಾವು ಜಿಲ್ಲೆಗಳಿಗೆ ಭೇಟಿ ನೀಡಿ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರಿಗೆ ಎಸ್‌ಸಿ ಮೋರ್ಚಾದಿಂದ ಸನ್ಮಾನ ಮಾಡಿ ರಕ್ಷಣೆ ಕೊಡುವ ಕೆಲಸ ಮಾಡಲಿದ್ದೇವೆ. ದಾವಣಗೆರೆಯಲ್ಲಿ ಇದೇ 6ರಂದು ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಲಾಲ್ ಸಿಂಗ್ ಆರ್ಯ ಅವರು ಭಾಗವಹಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‌ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಕುಮಾರ್, ಶ್ರೀ ಸಿದ್ದರಾಜು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್‌ಕುಮಾರ್, ಸಂಸದರಾದ ಶ್ರೀ ಸಿದ್ದೇಶ್ವರ್, ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ ಎಂದರು.

ರಾಜ್ಯ ಸರಕಾರವನ್ನು ವಿಸರ್ಜಿಸಬೇಕು ಎಂಬ ಬೇಡಿಕೆ ಮುಂದಿಡುವ ಸಿದ್ದರಾಮಯ್ಯ ಅವರು ಸ್ವತಃ ರಾಜಕೀಯ ನಿವೃತ್ತಿ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಮಹಾದೇವಪ್ಪ ಅವರ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದರು.

ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಶ್ರೀ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಗದೀಶ್, ಬೆಂಗಳೂರು ಕೇಂದ್ರ ನಗರ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here