ಬೆಂಗಳೂರು ಪೊಲೀಸರು ಯುಪಿಗೆ ತೆರಳಿದ ಬೆನ್ನಲ್ಲೇ ಟೆಕ್ಕಿ ಅತುಲ್ ಅತ್ತೆ, ಬಾಮೈದ ಮನೆ ಬಿಟ್ಟು ಪರಾರಿ?
ಜೌನ್ಪುರ/ಬೆಂಗಳೂರು : ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಬೆಂಗಳೂರು ಪೊಲೀಸರು ಉತ್ತರಪ್ರದೇಶಕ್ಕೆ ತೆರಳಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಅವರ ಅತ್ತೆ ಹಾಗೂ ಬಾಮೈದ ಔನ್ಪುರದಲ್ಲಿರುವ ತಮ್ಮ ಮನೆಯಿಂದ ಗುರುವಾರ ಪರಾರಿಯಾಗಿದ್ದಾರೆ.
ನಿಶಾ ಸಿಂಘಾನಿಯಾ ಹಾಗೂ ಅವರ ಪುತ್ರ ಅನುರಾಗ್ ಆಲಿಯಾಸ್ ಪಿಯೂಷ್ ಸಿಂಘಾನಿಯಾ ಜೌನ್ಪುರದ ಖೋವಾ ಮಂಡಿ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ಗುರುವಾರ ಅಪರಾಹ್ನ 1 ಗಂಟೆಗೆ ಬೈಕ್ನಲ್ಲಿ ತೆರಳಿದ್ದಾರೆ ಹಾಗೂ ಅವರು ಇದುವರೆಗೆ ಹಿಂದಿರುಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಉತ್ತರಪ್ರದೇಶದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ನಾವು ಕರ್ನಾಟಕ ಪೊಲೀಸರಿಂದ ಯಾವುದೇ ಅಧಿಕೃತ ಸಂದೇಶ ಸ್ವೀಕರಿಸಿಲ್ಲ ಎಂದು ಗುರುವಾರ ದೃಢಪಡಿಸಿದ್ದಾರೆ.
‘‘ಈ ಪ್ರಕರಣಕ್ಕೆ ಸಂಬಂಧಿಸಿ ನಾವು ಬೆಂಗಳೂರು ಪೊಲೀಸರಿಂದ ಇನ್ನೂ ಯಾವುದೇ ಸಂದೇಶ ಸ್ವೀಕರಿಸಿಲ್ಲ’’ ಎಂದು ಔನಪುರದ ಪೊಲೀಸ್ ಅಧೀಕ್ಷಕ ಅಜಯ್ಪಾಲ್ ಶರ್ಮಾ ಹೇಳಿದ್ದಾರೆ.
ಮನೆಯಿಂದ ತೆರಳದಂತೆ ತಡೆಯಲು ಅಥವಾ ಗೃಹ ಬಂಧನದಲ್ಲಿ ಇರಿಸಲು ನಿಶಾ ಸಿಂಘಾನಿಯಾ ಅವರನ್ನು ಬಂಧಿಸುವಂತೆ ಯಾವುದೇ ನಿರ್ದೇಶನಗಳನ್ನು ಜಾರಿಗೊಳಿಸಿಲ್ಲ ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಮಿಥಿಲೇಶ್ ಮಿಶ್ರಾ ದೃಢಪಡಿಸಿದ್ದಾರೆ.
