ಕಾರಡಗಿಯ ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸವಣೂರು: ಮಹಿಳೆಯರಿಗೆ ಉದ್ಯೋಗ ನೀಡುವಂತಹ ಮಿನಿ ಟೆಕ್ಸ್ ಟೈಲ್ ಪಾರ್ಕ್ ನ್ನು ಹುಲಗೂರಿನಲ್ಲಿ ಇದೇ ವರ್ಷ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಲಗೂರ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮತನಾಡಿದರು.
ಹುಲಗೂರ ಗ್ರಾಮ ಅತಿಹೆಚ್ಚು ಜನಸಂಖ್ಯೆ ಇರುವ ಪ್ರದೇಶ, ಶಿಗ್ಗಾಂವಿ, ಸವಣೂರು ಮತ್ತು ಕುಂದಗೋಳ ತಾಲ್ಲೂಕಿನ ಮಧ್ಯವರ್ತಿ ಸ್ಥಳವಾಗಿದ್ದು, ಈ ಭಾಗದ ರೈತರು, ವ್ಯಾಪರಗಳಿಗೆ ಪ್ರಮುಖ ಕೇಂದ್ರವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಭಾಗದ ಸೊಸೈಟಿ, ಕೆಸಿಸಿ ಬ್ಯಾಂಕ್ ಉತ್ತಮ ಕೆಲಸ ಮಾಡುತ್ತಿದ್ದು, ಇಲ್ಲಿನ ರೈತರಿಗೆ ಸಾಲ ಸೌಲಭ್ಯ ನೀಡುತ್ತಿರುವುದು ಅಭಿನಂದನೀಯ. ಅಲ್ಪಸಂಖ್ಯಾತರು ಹೆಚ್ಚಿರುವ ಈ ಪ್ರದೇಶದಲ್ಲಿ ಉರ್ದು ಶಾಲೆ ಅಭಿವೃದ್ಧಿಗೊಳಿಸಲಾಗಿದೆ.ಹುಲಗೂರಿನಲ್ಲಿ 30 ಹಾಸಿಗೆಯ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಹುಲಗೂರ ಬಸ್ ನಿಲ್ದಾಣ ಮಾಡಲಾಗಿದೆ. ಹುಲಗೂರು ಸಂಪರ್ಕಿಸುವ ರಸ್ತೆ ನಿರ್ಮಾಣ, ವಾಲ್ಮೀಕಿ ಭವನ, ಅಂಬೇಡ್ಕರ್ ಭವನ, ನಿರ್ಮಿಸಲಾಗುತ್ತಿದೆ ಎಂದರು.
ಎಪಿಎಂಸಿಯಲ್ಲಿ ಸಾವಿರ ಟನ್ ಸಾಮರ್ಥ್ಯದ ಗೋದಾಮು :
ಎಪಿಎಂಸಿ ಉತ್ತಮ ಚಟುವಟಿಕೆಗೆ ಸಾವಿರ ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸಲಾಗಿದೆ. ಇಲ್ಲಿಯ ವರ್ತಕರಿಗೆ ಪರವಾನಗಿಯನ್ನು ನೀಡಿ, ರೈತರ ಸಹಕಾರದೊಂದಿಗೆ ಉತ್ತಮ ಎಪಿಎಂಸಿ ಕಾರ್ಯಾರಂಭವಾಗಲಿದೆ. ಕೃಷಿ ಯಂತ್ರೋಪಕರಣ ಕೇಂದ್ರ ನಿರ್ಮಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ,ಆರೋಗ್ಯ, ಶಿಕ್ಷಣಗೆ ಒತ್ತು ನೀಡಲಾಗಿದೆ ಎಂದರು.
ಹುಲಗೂರು ಗ್ರಾಮಕ್ಕೆ 350 ಮನೆಗಳು ಮಂಜೂರು:
ಬಡವರಿಗೆ ಹೆಚ್ಚವರಿ ಮನೆಗಳನ್ನು ನಿರ್ಮಿಸಿ ವಿತರಿಸಲಾಗಿದೆ. ಈಗಾಗಲೇ 240 ಮನೆಗಳು ಮಂಜೂರಾಗಿದ್ದು, ಕೆಲಸ ಪ್ರಾರಂಭವಾಗಿದೆ. ಹೊಸದಾಗಿ 350 ಮನೆಗಳನ್ನು ಹುಲಗೂರು ಗ್ರಾಮ ಪಂಚಾಯ್ತಿಗೆ ಮಂಜೂರು ಮಾಡಲಾಗಿದೆ.ಫಲಾನುಭವಿಗಳ ಪಟ್ಟಿಯಲ್ಲಿ ಶೀಘ್ರದಲ್ಲಿ ಮಾಡಬೇಕು. 3 ತಾಲ್ಲೂಕುಗಳ ಕೇಂದ್ರವಾಗಿರುವ ಹುಲಗೂರಿನಲ್ಲಿ ನೂತನ ಪೊಲೀಸ್ ಕಟ್ಟಡ ನಿರ್ಮಾಣ ಕಾರ್ಯ 8-10 ತಿಂಗಳೊಳಗೆ ಮಾಡಲಾಗುವುದು. ಈ ಭಾಗದಲ್ಲಿ ಎಲ್ಲ ಸಮುದಾಯಗಳು ಒಗ್ಗಟ್ಟಾಗಿದ್ದು, ಇದನ್ನೇ ಮುಂದುವರೆಸಿಕೊಂಡು ಹೋಗಬೇಕು. ಪುರಸಭೆಯ ಮಟ್ಟಕ್ಕೆ ಹುಲಗೂರು ಗ್ರಾಮವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುವುದುಹೆಣ್ಣುಮಕ್ಕಳಿಗೆ ತರಬೇತಿ ಕೇಂದ್ರವನ್ನು ಶಿಗ್ಗಾಂವಿಯಲ್ಲಿ ಪ್ರಾರಂಭಿಸಲಾಗಿದ್ದು, ಈ ಭಾಗದ ಮಹಿಳೆಯರೂ ತರಬೇತಿ ಪಡೆಯಬಹುದಾಗಿದೆ ಎಂದರು. ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.