Home Uncategorized ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ರಿಟ್ ಅರ್ಜಿ: ಪಿ.ಎಸ್.ವಸ್ತ್ರದ್ ನೇಮಕ ರದ್ದತಿಗೆ ಮನವಿ

ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ರಿಟ್ ಅರ್ಜಿ: ಪಿ.ಎಸ್.ವಸ್ತ್ರದ್ ನೇಮಕ ರದ್ದತಿಗೆ ಮನವಿ

7
0

ಚಿತ್ರದುರ್ಗ: ಕರ್ನಾಟಕ ಸರ್ಕಾರ ಚಿತ್ರದುರ್ಗದ ಮುರುಘಾಮಠಕ್ಕೆ (Murugha Math) ಆಡಳಿತಾಧಿಕಾರಿಯನ್ನಾಗಿ ನಿವೃತ್ತ IAS ಅಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ಡಿ. 13ರಂದು ನೇಮಿಸಿದೆ. ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಆದೇಶ ಹೊರಡಿಸಿದ್ದರು. ಆದರೆ ಈಗ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಡಿ.ಎಸ್.ಮಲ್ಲಿಕಾರ್ಜುನ ಮತ್ತಿತರರಿಂದ ರಿಟ್ ಅರ್ಜಿ ಸಲ್ಲಿಸಲಾಗಿದೆ. ಜೊತೆಗೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ನೇಮಕ ರದ್ದತಿಗೆ ಮನವಿ ನೀಡಲಾಗಿದೆ. ಈಗಾಗಲೇ ಡಾ. ಶಿವಮೂರ್ತಿ ಮುರುಘಾ ಶರಣರು ಶಿಕ್ಷಣ ಸಂಸ್ಥೆಗಳಿಗೆ ನಿವೃತ್ತ ನ್ಯಾಯಾಧೀಶರಿಗೆ ಜಿಪಿಎ ನೀಡಿದ್ದಾರೆ. ಮಠದ ವ್ಯವಹಾರಗಳಿಗೆ ಬಸವಪ್ರಭು ಸ್ವಾಮಿಗೆ ಜಿಪಿಎ ನೀಡಲಾಗಿದೆ. ಮಠಾಧಿಪತಿ ಜೈಲಿನಲ್ಲಿರುವುದು ಆಡಳಿತಾಧಿಕಾರಿ ನೇಮಿಸಲು ಸಕಾರಣವಲ್ಲ ಹೀಗಾಗಿ ಆಡಳಿತಾಧಿಕಾರಿ ನೇಮಕ ರದ್ದುಪಡಿಸಲು ಕೋರಿ ರಿಟ್ ಸಲ್ಲಿಕೆ ಮಾಡಲಾಗಿದೆ.

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ಹಿನ್ನೆಲೆ ಶಿವಮೂರ್ತಿ ಮುರುಘಾ ಶರಣರು ಕಳೆದ 3 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರಿಂದ ಹಲವು ದಿನಗಳಿಂದ ಮುರುಘಾಮಠದ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಗಳು ಬರುತ್ತಿದ್ದವು. ಅಂತಿಮವಾಗಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡು ಅದರ ಆಧಾರದ ಮೇಲೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದೆ. ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಸಲ್ಲಿಸಿರುವ ವರದಿ ಆಧರಿಸಿ ಆಡಳಿತಾಧಿಕಾರಿ ನೇಮಕ ಮಾಡಲಾಗುವುದು ಎಂದು ಈ ಹಿಂದೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳ ಮುಂದೆ ಹೇಳಿದ್ದರು.

ಇದನ್ನೂ ಓದಿ: ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಆದೇಶವನ್ನು ಸರ್ಕಾರ ಹಿಂಪಡೆಯಬೇಕು: ಬಸವಪ್ರಭು ಸ್ವಾಮೀಜಿ

ನಿವೃತ್ತ ಐಎಎಸ್​ ಅಧಿಕಾರಿ ಪಿ.ಎಸ್.ವಸ್ತ್ರದ್ ಅಧಿಕಾರ ಸ್ವೀಕಾರ

ನಿವೃತ್ತ ಐಎಎಸ್​ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು ಇಂದು (ಡಿ. 15) ರಂದು ಸರ್ಕಾರದ ಆದೇಶದಂತೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ಸ್ವೀಕರಿಸಿ ಮುರುಘಾಮಠದ ಕರ್ತೃಗದ್ದುಗೆ ದರ್ಶನ ಪಡೆದುಕೊಂಡರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮುರುಘಾಶರಣರು ಜಿಪಿಎ ನೀಡಿರುವ ಬಗ್ಗೆ ಪರಿಶೀಲಿಸಬೇಕಿದೆ. ಎಸ್​ಜೆಎಂ ವಿದ್ಯಾಪೀಠದ ಕಾರ್ಯದರ್ಶಿ, ಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭುಶ್ರೀಗೆ ಜಿಪಿಎ ನೀಡಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆಗಳಿಗೆ ಪರಿಹಾರ ಹುಡುಕಲಾಗುವುದು ಎಂದು ಪಿ.ಎಸ್.ವಸ್ತ್ರದ್​ ಹೇಳಿದರು.

ಇದನ್ನೂ ಓದಿ: ಆಡಳಿತಾಧಿಕಾರಿ ನೇಮಕವಾಗಿದೆ; ಇನ್ನೇನು ಹಸ್ತಕ್ಷೇಪ ಮಾಡಬೇಡಿ -ಮುರುಘಾ ಶರಣಗೆ ಜಡ್ಜ್​​ ಕೋಮಲಾ ಖಡಕ್ ಆದೇಶ

ಮುರುಘಾ ಮಠ ಅಧೀನ ಸಂಸ್ಥೆ ಎಸ್​​ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಉದ್ಯಮಿ ಭರತ್ ನೇಮಕ

ಚಿತ್ರದುರ್ಗ ಮುರುಘಾ ಮಠದ ಅಧೀನ ಸಂಸ್ಥೆಯಾಗಿರುವ ಎಸ್​​ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭರತ್​ ಅವರನ್ನು ನೇಮಕ ಮಾಡಲಾಗಿದೆ. ವಿದೇಶದಲ್ಲಿ ಕಾರ್ಯ ನಿರ್ವಹಿಸಿರುವ ಚಿತ್ರದುರ್ಗ ಮೂಲದ ಉದ್ಯಮಿ ಭರತ್ ಕುಮಾರ್ ಅವರು ಮುರುಘಾ ಮಠದ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಶ್ರೀಗಳು, ಎಸ್​​ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್​.ಬಿ.ವಸ್ತ್ರದಮಠ ಉಪಸ್ಥಿತರಿದ್ದರು.

ಮುರುಘಾಶ್ರೀ ವಜಾಕ್ಕೆ ಹೆಚ್ಚಿದ ಒತ್ತಡ

ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾಶ್ರೀಯನ್ನು ಚಿತ್ರದುರ್ಗ ಮುರುಘಾಮಠದ ಪೀಠಾದ್ಯಕ್ಷ ಸ್ಥಾನದಿಂದ‌‌ ವಜಾ ಮಾಡಲು ಒತ್ತಡ ಹೆಚ್ಚಾಗಿದೆ. ಹೀಗಾಗಿ ಇಂದು ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಭೆ ನಡೆಯಲಿದೆ. ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ಚಿತ್ರದುರ್ಗ ತಾಲೂಕಿನ ಸಿಬಾರ ಬಳಿಯ ಎಸ್.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಸಭೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here