ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದಾರೆ. ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದಾರೆ.
ಮಧ್ಯಾಹ್ನ ನಂತರ ಅವರು ಲೋಕಾಯುಕ್ತರಿಗೂ ದೂರು ನೀಡಲಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧ ಹಿರಿಯ ಐಪಿಎಸ್ ಅಧಿಕಾರಿಯಾದ ಡಿ.ರೂಪ ಮೌದ್ಗೀಲ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬರೆದಿರುವ ಆರೋಪಗಳ ಬಗ್ಗೆ ಅಖಿಲ ಭಾರತ ಸೇವಾ (ನಡತೆ) ನಿಯಮಗಳು, 1962 ರ ನಿಯಮದ ಅಡಿಯಲ್ಲಿ ತನಿಖೆ ನಡೆಸುವಂತೆ ಮನವಿ ಸಲ್ಲಿಸುತ್ತಿದ್ದೇನೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ದಿನೇಶ್ ಕಲ್ಲಹಳ್ಳಿ ಉಲ್ಲೇಖಿಸಿದ್ದಾರೆ.
ರೋಹಿಣಿ ವಿರುದ್ಧ ರೂಪ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆಳೆದು ಸಾರ್ವಜನಿಕರಿಗೆ ಅಧಿಕಾರಿಗಳ ಬಗ್ಗೆ ಇರುವ ನಂಬಿಕೆ-ಅಪನಂಬಿಕೆಗಳಿಗೆ ತೆರೆ ಎಳೆದು ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಶಿಸ್ತು ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.
ಇಬ್ಬರು ಮಹಿಳಾ ಅಧಿಕಾರಿಗಳ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಇವರ ಇಬ್ಬರ ಜಗಳದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಹೆಸರು ಎಳೆದು ತಂದಿದ್ದು, ಈ ವಿಚಾರವಾಗಿ ಡಿ.ಕೆ.ರವಿ ತಾಯಿ ಗೌರಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಚಾನೆಲ್ ಜೊತೆ ಮಾತನಾಡಿರುವ ಗೌರಮ್ಮ, ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಹೇಳಿದ್ದಾರೆ. ನನ್ನ ಮಗ ಹೋಗಿ 8 ವರ್ಷವಾಯ್ತು. ಡಿ.ಕೆ.ರವಿಯನ್ನು ನಾನು ಸಾಕಿ ಬೆಳೆಸಿದ್ದೇನೆ. ರವಿ ಜತೆ ಕುಸುಮಾ 5 ವರ್ಷ ಅಷ್ಟೆ ಸಂಸಾರ ಮಾಡಿದ್ದಾಳೆ. ನನ್ನ ಮಗ ಇರುವವರೆಗೂ ಮಾತ್ರ ಆಕೆ ಸೊಸೆ. ಹೀಗಾಗಿ ನೀವ್ಯಾರೂ ನನ್ನ ಮಗನ ಹೆಸರನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.