ಆದಾಯಕ್ಕೂ ಮೀರಿ ಆಸ್ತಿ ಗಳಿಕೆ | ನಾನು ಸಾಯೋವರೆಗೂ ಈ ರೀತಿ ಕೇಸ್ ಎದುರಿಸಬೇಕು ಎಂದ ಡಿಕೆ ಶಿವಕುಮಾರ್
ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಹೈ ಕೋರ್ಟ್ ತೀರ್ಪಿನ ಬಳಿಕ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಾಯವವರೆಗೂ ಈ ರೀತಿ ಕೇಸ್ಗಳನ್ನು ಎದುರಿಸಲೇಬೇಕು. ನನ್ನ ಪರವಾಗಿ ನಿಂತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನನ್ನ ಪರವಾಗಿ ಹೈಕೋರ್ಟ್ ನಲ್ಲಿ ವಾದ ಮಾಡಿದ ವಕೀಲರಿಗೂ ಧನ್ಯವಾದ ಹೇಳುತ್ತೇನೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೂ ಈ ಪ್ರಕರಣಕ್ಕೂ ಏನು ಸಂಬಂಧ ಇದೆ? ಸಿಬಿಐ ನವರೇ ಈ ಪ್ರಕರಣಕ್ಕೆ ಅಷ್ಟು ತಲೆಕೆಡಿಸಿಕೊಂಡಿಲ್ಲ ಎಂದರು.
ಇನ್ನು ವಿಜಯಪುರ ಶಾಸಕ ಯತ್ನಾಳ್ ಅವರು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಹೋಗಲಿ. ಅವರಿಗೂ ನ್ಯಾಯಾಲಯ, ನಮಗೂ ನ್ಯಾಯಾಲಯ ಇದೆ. ನಾನು ಸಾಯೋವರೆಗೂ ಈ ರೀತಿ ಕೇಸ್ಗಳನ್ನ ಎದುರಿಸಲೇಬೇಕು ಎಂದರು.
ಹಿಂದೆ ನನ್ನನ್ನು ಜೈಲಿಗೆ ಕಳುಹಿಸಿದ್ರು. ಅವತ್ತು ಕೂಡ ಹೇಳಿದ್ದೆ ನನಗೆ ನ್ಯಾಯ ಸಿಗುತ್ತೆ ಎಂದು. ನನ್ನ ಮೇಲಿನ ಈಡಿ ಕೇಸ್ ಕೂಡ ವಜಾ ಆಯ್ತು. ನಾನೇನು ತಪ್ಪು ಮಾಡಿಲ್ಲ ಎಂದು ಅವತ್ತು ವಾದ ಮಾಡಿದ್ದೆ ಇವತ್ತು ಮಾಡ್ತಾ ಇದ್ದೇನೆ. ಇವತ್ತಿನ ಜಯ ನನಗಿಂತ ಹೆಚ್ಚಾಗಿ ಕರ್ನಾಟಕ ಸರ್ಕಾರಕ್ಕೆ ಸಿಕ್ಕ ಜಯವಾಗಿದೆ. ನನ್ನ ಆಸ್ತಿ ಏನಿದೆ ಅಂತ ನನಗೆ ಗೊತ್ತಿದೆ. ಈ ಸಂಬಂಧ ನಾನು ದಾಖಲೆ ಕೊಟ್ಟಿದ್ದೇನೆ. ನಮಗೆ ತೊಂದ್ರೆ ಕೊಡುವಂತಹ ಕೆಲಸ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
