Karnataka Health Minister Dinesh Gundu Rao sends back Ambulance that was being brought for inauguration
ಆನೆ ದಾಳಿಗೀಡಾದ ಬಡಕಟ್ಟ ವ್ಯಕ್ತಿಯ ನೆರವಿಗೆ ಧಾವಿಸಿದ ನೂತನ ಅಂಬುಲೆನ್ಸ್
ಬೆಂಗಳೂರು:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಂದ ಉದ್ಘಾಟಿಸಲು ತರುತ್ತಿದ್ದ ನೂತನ ಅಂಬುಲೆನ್ಸ್ ಅನ್ನ ಮಾರ್ಗ ಮಧ್ಯದಲ್ಲಿಯೇ ವಾಪಸ್ ಕಳುಹಿಸಿದ ಘಟನೆ ಸಚಿವರ ಚಾಮರಾಜ ನಗರ ಕೊಳ್ಳೆಗಾಲದ ಪ್ರವಾಸದಲ್ಲಿ ನಡೆಯಿತು.
ಪ್ರತಿಯೊಂದು ಸಚಿವರಿಂದ ಉದ್ಘಾನೆಯಾಗಲಿ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ವಿಶೇಷವಾಗಿ ಆರೋಗ್ಯ ವಿಚಾರಗಳಲ್ಲಿ ಉದ್ಘಾಟನೆಗಿಂತ ಜನರ ಸಂಕಷ್ಟಗಳಿಗೆ ಮೊದಲು ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಆದಿವಾಸಿಗಳ ಅನುಕೂಲಕ್ಕಾಗಿ ಸಿಎಸ್ಆರ್ ಯೋಜನೆಯಡಿ ಆಕ್ಸಾ ಬಿಸಿನೆಸ್ ಸರ್ವೀಸ್ ನವರು ಆದಿವಾಸಿಗಳ ಆರೋಗ್ಯ ಸಂಶೋಧನಾ ಕೇಂದ್ರಕ್ಕೆ ಅಂಬುಲೆನ್ಸ್ ಒದಗಿಸಿದ್ದರು.
ಚಾಮರಾಜನಗರ ಪ್ರವಾಸದಲ್ಲಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೂತನ ಅಂಬುಲೆನ್ಸ್ ಅನ್ನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಗೆ ಹಸ್ತಾಂತರಿಸಬೇಕಿತ್ತು. ಸಚಿವರಿಂದ ಚಾಲನೆ ಕೊಡಿಸಲು ಅಂಬುಲೆನ್ಸ್ ಅನ್ನ ಕೊಳ್ಳೆಗಾಲಕ್ಕೆ ತರಲಾಗುತ್ತಿತ್ತು. ಇದೇ ವೇಳೆ ಗೊಂಬೆಗಲ್ ಭಾಗದಲ್ಲಿ ಆನೆದಾಳಿಯಾಗಿ ವ್ಯಕ್ತಿಯೋರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಕರೆ ಬಂತು.

ಮೈಸೂರಿನಿಂದ ಕೊಳ್ಳೆಗಾಲಕ್ಕೆ ಸಚಿವರು ತೆರಳುತ್ತಿದ್ದ ವೇಳೆ ಈ ಬಗ್ಗೆ ವಿಚಾರ ತಿಳಿಸಿದಾಗ, ತಕ್ಷಣ ಅಂಬುಲೆನ್ಸ್ ಅನ್ನ ಆನೆ ದಾಳಿಯಾದ ಪ್ರದೇಶಕ್ಕೆ ಕಳಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಉದ್ಘಾಟನೆಗಾಗಿ ಕೊಳ್ಳಗಾಲಕ್ಕೆ ಬರುತ್ತಿದ್ದ ಅಂಬುಲೆನ್ಸ್ ಅನ್ನ ಮಾರ್ಗ ಮಧ್ಯದಲ್ಲಿಯೇ ವಾಪಸ್ ಕಳುಹಿಸಿದರು. ಸಚಿವರಿಂದ ಉದ್ಘಾಟನೆಗಾಗಿ ತರುವ ಅಗತ್ಯವಿಲ್ಲ. ನೇರವಾಗಿ ಆನೆದಾಳಿ ನಡೆದ ಪ್ರದೇಶಕ್ಕೆ ಅಂಬುಲೆನ್ಸ್ ಸೇವೆ ಒದಗಿಸಿ ಆ ಮೂಲಕವೇ ಚಾಲನೆ ನೀಡಿ ಎಂದು ಹೇಳಿದರು.
ಸಚಿವರ ಸೂಚನೆಯಂತೆ ಅಂಬುಲೆನ್ಸ್ ಅನ್ನ ಆನೆದಾಳಿಗಿಡಾದವರ ಬಳಿ ಕೊಂಡೊಯ್ದು ಸಂತ್ರಸ್ತರನ್ನ ಆಸ್ಪತ್ರೆಗೆ ಸಾಗಿಸಿ ನೆರವಿಗೆ ಧಾವಿಸಲಾಯಿತು.
