Home ಮಂಡ್ಯ ಸಚಿವ ಡಾ.ನಾರಾಯಣ ಗೌಡರಿಂದ ಮಂಡ್ಯ ಜನರಿಗೆ ಕಾವೇರಿ ತೀರ್ಥ ವಿತರಣೆ

ಸಚಿವ ಡಾ.ನಾರಾಯಣ ಗೌಡರಿಂದ ಮಂಡ್ಯ ಜನರಿಗೆ ಕಾವೇರಿ ತೀರ್ಥ ವಿತರಣೆ

66
0
Minister Narayana Gowda distributes Cauvery Theertha to Mandya people

ಮಂಡ್ಯ:

ಅ.17: ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಅವರು ಇಲ್ಲಿನ ಕಾಳಿಕಾಂಬ ದೇವಸ್ಥಾನದಲ್ಲಿ ಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಿದರು.

ಇಂದು ತಲಕಾವೇರಿಯಲ್ಲಿ ತೀರ್ಥರೂಪಿಣಿ ಆರ್ವಿಭವಿಸಿದ ಕಾವೇರಿ ಮಾತೆಯ ದರ್ಶನ ಪಡೆದ ಸಚಿವ ಡಾ.ನಾರಾಯಣ ಗೌಡರು, ಅಲ್ಲಿಂದ ಕಾವೇರಿ ತೀರ್ಥವನ್ನು ತೆಗೆದುಕೊಂಡು ಬಂದಿದ್ದರು. ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದದ ರೂಪದಲ್ಲಿ ಸಾರ್ವಜನಿಕರಿಗೆ ಹಂಚಿದರು.

ಈ ದಿನ ಕಾವೇರಿ ತೀರ್ಥವನ್ನು ಮಂಡ್ಯ ನಗರಕ್ಕೆ ತಂದಿದ್ದು ತುಂಬಾ ಸಂತೋಷ ತಂದಿದೆ. ಕಾವೇರಿ ತೀರ್ಥವನ್ನು ಇಡೀ ಮಂಡ್ಯ ನಗರಕ್ಕೆ ಹಂಚಲು ಬಯಸುತ್ತೇನೆ.

ಇಲ್ಲಿ ಓದಿ: ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡ ಸಚಿವ ಡಾ. ನಾರಾಯಣಗೌಡ

ಕಾವೇರಿ ತಾಯಿಯ ಮಡಿಲಿಗೆ ಹೋಗಿ ತೀರ್ಥವನ್ನು ನನ್ನ ಜನ್ಮ ಭೂಮಿಗೆ ತರಲು ಅವಕಾಶ ಸಿಕ್ಕಿದ್ದಕ್ಕೆ ನಾನೇ ಧನ್ಯ ಎಂದು ಸಚಿವ ಡಾ‌.ನಾರಾಯಣ ಗೌಡ ಹೇಳಿದರು.

Minister Narayana Gowda distributes Cauvery Theertha to Mandya people

ನಾಳೆ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಸಿಹಿ ಬರಲಿ ಎಂದು ಆ ದೇವಿಯಲ್ಲಿ ಕೇಳಿಕೊಳ್ಳುತ್ತೇನೆ.

ಕಾವೇರಿ ಮಾತೆಯಿಂದ ನಾವೆಲ್ಲರೂ ಅನ್ನವನ್ನು ತಿನ್ನುತ್ತಿದ್ದೇವೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರ ಶ್ರಮದ ಫಲವಾಗಿ ನಮಗೆ ಜೀವಜಲ ದೊರೆತಿದೆ.

ಕಾವೇರಿ ತಾಯಿ ಸರ್ವರನ್ನೂ ಸುಖಿಯಾಗಿರಿಸಲೆಂದು ಆಶಿಸುತ್ತಾ, ಹಲವು ವರ್ಷಗಳಿಂದ ಜೀವಂತವಾಗಿರುವ ಕಾವೇರಿ ವಿವಾದಕ್ಕೆ ಸುಖಾಂತ್ಯ ಕಾಣಲಿ ಹಾಗೂ ಮೇಕೆದಾಟು ಯೋಜನೆ ಶೀಘ್ರದಲ್ಲಿ ಕಾರ್ಯಗತಗೊಳ್ಳಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥನೆ ಮಾಡೋಣ ಎಂದು ಸಚಿವ ಡಾ.ನಾರಾಯಣ ಗೌಡ ಅವರು ಹೇಳಿದರು.

ಶಾಸಕರಾದ ಶ್ರೀನಿವಾಸ್ ಮಾತನಾಡಿ ಕಾವೇರಿ ತೀರ್ಥವನ್ನು ಮಂಡ್ಯಕ್ಕೆ ತಂದಿರುವುದಕ್ಕೆ ಮಂಡ್ಯ ನಗರದ ಜನತೆಯ ಪರವಾಗಿ ಸಚಿವ ಡಾ.ನಾರಾಯಣ ಗೌಡ ಅವರಿಗೆ ಧನ್ಯವಾದ ತಿಳಿಸಿದರು‌.

ಕಾವೇರಿ ತೀರ್ಥವನ್ನು ನಗರಕ್ಕೆ ತಂದು ಸಿಹಿಯನ್ನು ಕೊಟ್ಟಿದ್ದಾರೆ. ಅದೇ ರೀತಿ ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯಕ್ಕೆ ವಹಿಸಿದರೇ ಬಹಳ ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷರಾದ ಶ್ರೀನಿವಾಸ್, ಮಾಜಿ ಸಚಿವರಾದ ಆತ್ಮಾನಂದ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಬಿಜೆಪಿಯ ಮುಖಂಡರಾದ ಶಿವಣ್ಣ, ಮೈಷುಗರ್ ಕಾರ್ಖಾನೆಯ ಅಧ್ಯಕ್ಷರಾದ ಶಿವಲಿಂಗೇಗೌಡ, ನಗರ ಸಭಾ ಅಧ್ಯಕ್ಷರಾದ ಎಚ್.ಎಸ್ ಮಂಜು, ಬಿಜೆಪಿಯ ಇಂದ್ರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here