ಇಂದು ಸೋಮವಾರ ಫೆಬ್ರವರಿ 27 ಮಾಜಿ ಮುಖ್ಯಮಂತ್ರಿ ಬಿಜೆಪಿಯ ಪ್ರಬಲ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪನವರ 80ನೇ ಹುಟ್ಟುಹಬ್ಬ. ಇಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದು ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ: ಇಂದು ಸೋಮವಾರ ಫೆಬ್ರವರಿ 27 ಮಾಜಿ ಮುಖ್ಯಮಂತ್ರಿ ಬಿಜೆಪಿಯ ಪ್ರಬಲ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪನವರ 80ನೇ ಹುಟ್ಟುಹಬ್ಬ. ಇಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದು ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ.
ಅಭಿಮಾನಿಗಳಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ: ಯಡಿಯೂರಪ್ಪನವರ ಹುಟ್ಟು ಹಬ್ಬ ಹಿನ್ನೆಲೆ ಯಡಿಯೂರಪ್ಪ ಮನೆಯ ದೇವರಾದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಷ್ಟೋತ್ತರ ಸೇವೆ, ರುದ್ರಾಭಿಷೇಕ ಸೇರಿದಂತೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದಾರೆ.
ಕುಟುಂಬ ಸಮೇತರಾಗಿ ಬಿಎಸ್ ಯಡಿಯೂರಪ್ಪ ನೂತನ ಏರ್ ಪೋರ್ಟ್ ನತ್ತ ತೆರಳಿದ್ದಾರೆ. ಪುತ್ರಿ ಅರುಣಾ ಹಾಗೂ ಕುಟುಂಬಸ್ಥರು ಸಹ ಏರ್ ಪೋರ್ಟ್ ನತ್ತ ಪ್ರಯಾಣ ಬೆಳೆಸಿದ್ದಾರೆ.
ಗುರು ರಾಘವೇಂದ್ರ ಮೊರೆ: ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಶಿವಮೊಗ್ಗದ ತಿಲಕನಗರದಲ್ಲಿರುವ ರಾಘವೇಂದ್ರಸ್ವಾಮಿ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನನ್ನ ಹುಟ್ಟುಹಬ್ಬದ ವೇಳೆ ಸ್ವತಃ ಮೋದಿ ಆಗಮಿಸುತ್ತಿರುವುದು ವಿಶೇಷ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಮತ್ತೊಮ್ಮೆ ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಇಂದು ಮರೆಯಲಾಗದ ಶುಭದಿನ. ಈ ಭಾಗದ ಜನರ ಕನಸು ಬಹಳ ವರ್ಷಗಳ ನಂತರ ನನಸಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸ್ವತಃ ಪ್ರಧಾನಿಯವರೇ ಬಂದು ಉದ್ಘಾಟನೆ ಮಾಡುತ್ತಿರುವುದು ಸಂತಸದ ಸಂಗತಿ, ಎಲ್ಲರೂ ವಿಮಾನ ನಿಲ್ದಾಣವನ್ನು ಸಂಚಾರ ಮತ್ತು ಇತರ ಜೀವನೋಪಾಯಕ್ಕೆ ಉಪಯೋಗ ಮಾಡಿಕೊಂಡರೆ ಇನ್ನೂ ಒಳ್ಳೆಯದಾಗುತ್ತದೆ, ವಿಮಾನ ನಿಲ್ದಾಣದಿಂದ ಉದ್ಯೋಗಾವಕಾಶಗಳು, ಪ್ರವಾಸೋದ್ಯಮಕ್ಕೆ ಶಕ್ತಿ ಬರುತ್ತದೆ ಎಂದರು.
ಯಡಿಯೂರಪ್ಪನವರ ಪರಿಶ್ರಮದಿಂದ ಏರ್ ಪೋರ್ಟ್ ನಿರ್ಮಾಣ: ಶಿವಮೊಗ್ಗಕ್ಕೆ ಬಂದಿಳಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ಒಂದು ಮೈಲಿಗಲ್ಲು. ಯಡಿಯೂರಪ್ಪನವರ ಪರಿಶ್ರಮದಿಂದ ಏರ್ಪೋರ್ಟ್ ಆಗಿದೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ವಿಮಾನಯಾನ ಕ್ಷೇತ್ರ ಅಭಿವೃದ್ಧಿ ಆಗ್ತಿದೆ. ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗಿದೆ. ಬಿಎಸ್ವೈ ಪರಿಶ್ರಮಕ್ಕೆ ಸಂದ ಫಲ ಇದು. ಮಲೆನಾಡಿನ ಆರ್ಥಿಕ & ಪ್ರವಾಸೋದ್ಯಮಕ್ಕೆ ಸಹಾಯವಾಗಲಿದೆ. ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಏರ್ಪೋರ್ಟ್ ಉದ್ಘಾಟನೆಯಾಗುತ್ತಿದ್ದು ಇದು ಅತ್ಯಂತ ವಿಶೇಷ ಹಾಗೂ ದೈವ ಇಚ್ಛೆ ಎಂದು ಹೇಳಿದರು.
ಪ್ರಧಾನಿ ಭೇಟಿ, ಲಕ್ಷೋಪಲಕ್ಷ ಅಭಿಮಾನಿಗಳು, ಊಟ ತಿಂಡಿ ವ್ಯವಸ್ಥೆ: ಶಿವಮೊಗ್ಗಕ್ಕೆ ಮೋದಿ ಭೇಟಿ ಹಿನ್ನೆಲೆ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಬಿಸಿಬೇಳೆ ಬಾತ್, ಮೈಸೂರ್ ಪಾಕ್, ಕೇಸರಿಬಾತ್ ಸೇರಿದಂತೆ ತಿಂಡಿ ವ್ಯವಸ್ಥೆ ಮಾಡಲಾಗಿದ್ದು 1 ಲಕ್ಷಕ್ಕೂ ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಬೆಳಿಗ್ಗೆ ತಿಂಡಿಗೆ ಎರಡು ಕಡೆ ತಿಂಡಿ ವ್ಯವಸ್ಥೆ ಮಾಡಲಾಗಿದೆ.
300ಕ್ಕೂ ಹೆಚ್ಚು ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದೆ. ಬಿಎಸ್ವೈ ಅಭಿಮಾನಿಗಳು ಕಾರ್ಯಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಹುಗ್ಗಿ, ಮೊಸರನ್ನ, ಮಜ್ಜಿಗೆ ಇರುತ್ತದೆ.