ಪಟಾಕಿ ಹೊಗೆಯಿಂದ ಕೊರೊನಾ ಹೆಚ್ಚು: ಡಾ.ಕೆ.ಸುಧಾಕರ್
ಬೆಂಗಳೂರು:
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂಬಂಧ ವೈದ್ಯಕೀಯ ತಜ್ಞರೇ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿದ್ದು ಪಟಾಕಿ ನಿಷೇಧ ಮಾಡಬೇಕೇ ಬೇಡವೇ ಎಂಬ ಬಗ್ಗೆ ನಾಳೆಯೊಳಗೆ ತಜ್ಞರ ಸಮಿತಿ ವರದಿ ನೀಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ರಾಜ್ಯದಲ್ಲಿ 15,654 ಜನರನ್ನು ಸಮೀಕ್ಷೆ ಮಾಡಲಾಗಿದೆ. ಈಗಾಗಲೇ ಕೋವಿಡ್ ಬಂದು ಗುಣಮುಖರಾಗಿರುವವರ ಸರಾಸರಿ ಶೇಕಡಾ 16.4 ರಷ್ಟಿದೆ. ಮುಂಬೈ, ಪುಣೆ ಮತ್ತು ತಮಿಳುನಾಡಿನಲ್ಲಿ ಹೆಚ್ಚಿದೆ. ಸಕ್ರಿಯ ಸೋಂಕಿತರ ಪ್ರಮಾಣ ಶೇಕಡಾ 12.7 ರಷ್ಟಿದೆ. ಎರಡೂ ಸೇರಿ ಶೇಕಡ 27.3.ಮರಣ ಪ್ರಮಾಣ ಶೇಕಡಾ 0.05 ಮಾತ್ರ ಇದೆ ಮುಂಬೈ 0.10 ಇದೆ.ದೆಹಲಿ 0.09 ಇದೆ.ರಾಜ್ಯದ 28 ಜಿಲ್ಲೆಗಳಲ್ಲಿ ಸಿರೋ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರ,ದಲ್ಲಿಯೂ ಇದೇ ರೀತಿ ಸರ್ವೆ ಮಾಡಲಾಗಿತ್ತು. ಆದರೆ ಅಲ್ಲಿ ಕೇವಲ ಮೆಟ್ರೋಪಾಲಿಟನ್ ಸಿಟಿ ಗಳಲ್ಲಿ ಸರ್ವೆ ಮಾಡಲಾಗಿತ್ತು.ಆದರೆ ನಮ್ಮ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮಾಡಲಾಗಿದೆ. ಮಾಡರೇಟ್ ರಿಸ್ಕ್ ಮತ್ತು ಹೈ ರಿಸ್ಕ್ ಇರುವ ಎರಡೂ ವಿಭಾಗಗಳ ಸೋಂಕಿತರ ಸರ್ವೆ ಮಾಡಲಾಗಿದೆ ಎಂದರು.
ಡಿಸೆಂಬರ್ ಅಂತ್ಯದಲ್ಲಿ ಹಾಗು ಫೆಬ್ರವರಿ ಮಾರ್ಚ್ ಗೆ ಇನ್ನು ಎರಡು ಹಂತದ ಸರ್ವೆ ಮಾಡಿಸಲಾಗುತ್ತದೆ. ಬಳ್ಳಾರಿ ಮತ್ತು ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಅದರಲ್ಲಿಯೂ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಶೇ.45 ಹಾಗು ದಕ್ಷಿಣ ವಿಭಾಗದಲ್ಲಿ ಶೇಕಡಾ 39ರಷ್ಟು ಸೋಂಕಿನ ಪ್ರಮಾಣ ಇದೆ ಎಂದು ಸಚಿವರು ವಿವರಿಸಿದರು.
ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿದೆ.ಅದೇ ಮಾದರಿಯಲ್ಲಿ ಸಂಪ್ರದಾಯಗಳಿಗೆ ತೊಂದರೆಯಾಗದಂತೆ ಸರಳ ರೀತಿಯಲ್ಲಿ ಹಬ್ಬಗಳ ಆಚರಣೆಗೆ ಅವಕಾಶ ಕೊಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ದಸರಾ ಹಾಗು ಉಪಚುನಾವಣೆ ನಡೆದ ಆರ್ ಆರ್ ನಗರ ಮತ್ತು ಶಿರಾದಲ್ಲಿ ರಾಂಡಮ್ ಟೆಸ್ಟ್ ಮಾಡಲು ಉದ್ದೇಶಿಸಲಾಗಿದೆ ಎಂದರು.