ಬೆಂಗಳೂರು:
ಮುಂದಿನ ದಿನಗಳಲ್ಲಿ ಯೋಜನಾಬದ್ಧವಾಗಿ ಬೆಂಗಳೂರನ್ನು ಅಭಿವೃದ್ಧಿ ಮಾಡಲು ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಯೋಕಾನ್ ಸಂಸ್ಥೆ ಆಯೋಜಿಸಿದ್ದ ‘ಬೆಂಗಳೂರು ಅಜೆಂಡಾ’ ಕುರಿತ ಚರ್ಚೆಯಲ್ಲಿ ಪಾಲ್ಗುಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಂಗಳೂರಿನ ಪ್ರಸಿದ್ಧ ಉದ್ಯಮಿಗಳು, ನಗರದ ಬಗ್ಗೆ ಆಸಕ್ತಿ ವಹಿಸಿ, ಹಲವಾರು ಸಲಹೆ ಸೂಚನೆಗಳನ್ನು ಹಿಂದಿನ ಸರ್ಕಾರದವರಿಗೂ ನೀಡುತ್ತಾ ಬಂದಿದ್ದಾರೆ. ಕೆಲವು ಹಿರಿಯ ಉದ್ಯಮಿಗಳು ಒಟ್ಟಾರೆ ಕರ್ನಾಟಕದ ಹಾಗೂ ಬೆಂಗಳೂರಿನ ಆರ್ಥಿಕತೆ ಹಾಗೂ ಅಭಿವೃದ್ಧಿ ಮತ್ತು ಯೋಜನೆಗಳ ಬಗ್ಗೆ ಯಾವ ರೀತಿಯ ಕೆಲಸಗಳನ್ನು ಮಾಡಬೇಕೆನ್ನುವ ಪ್ರಾಥಮಿಕ ಚಿಂತನೆಗಾಗಿ ನನ್ನನ್ನು ಆಹ್ವಾನಿಸಿರುವುದರಿಂದ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದರು.
Also Read: Govt to push for planned development of Bengaluru: Bommai
ಎಲ್ಲ ವಿಚಾರಗಳನ್ನು ತಿಳಿದುಕೊಂಡ ಮೇಲೆ, ಇನ್ನಷ್ಟು ಚರ್ಚೆಯ ಅವಶ್ಯಕತೆಯಿದೆ. ವಿವಿಧ ರಂಗದಲ್ಲಿರುವವರೂ ಕೂಡ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿದ್ದಾರೆ. ವಿಚಾರಗಳನ್ನು ತಿಳಿದುಕೊಂಡ ನಂತರ ಅಧಿಕಾರಿಗಳು, ಬೆಂಗಳೂರಿನ ಶಾಸಕರ ಜೊತೆಗೂ ಸಚಿವ ಸಂಪುಟದ ಸದಸ್ಯರೊಂದಿಗೆ ಚರ್ಚೆ ಮಾಡಿ, ತದನಂತರ ಬೆಂಗಳೂರಿನ ಅಜೆಂಡಾವನ್ನು ಶಾಸನಸಭೆಯಲ್ಲಿಯೂ ಇಟ್ಟು ಎಲ್ಲರ ಅಭಿಪ್ರಾಯವನ್ನು ಪಡೆಯಲಾಗುವುದು ಎಂದರು. ನಂತರ ಶಾಸನ ಸಭೆಯಲ್ಲಿ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇದೊಂದು ಸರಣಿಯ ಸಭೆಯಾಗಿದ್ದು, ಸರಣಿಯಲ್ಲಿ ಇದು ಮೊದಲನೆಯದು ಎಂದರು.