Home ರಾಜಕೀಯ ಅಧಿಕಾರ ಸದುಪಯೋಗದಿಂದ ಜನಪ್ರತಿನಿಧಿಗೆ ಗೌರವ- ಬಿ.ಎಲ್. ಸಂತೋಷ್ ಅಭಿಪ್ರಾಯ

ಅಧಿಕಾರ ಸದುಪಯೋಗದಿಂದ ಜನಪ್ರತಿನಿಧಿಗೆ ಗೌರವ- ಬಿ.ಎಲ್. ಸಂತೋಷ್ ಅಭಿಪ್ರಾಯ

121
0
Elected Representatives gets Respect from utilisation of Power - BJP Leader BL Santosh

ಬೆಂಗಳೂರು:

ಕೇವಲ ಪ್ರತಿಷ್ಠೆ, ಅಧಿಕಾರದಿಂದ ಗೌರವ ಸಿಗುವುದಿಲ್ಲ. ಅದನ್ನು ಸದುಪಯೋಗ ಪಡಿಸಿಕೊಂಡು ಬದಲಾವಣೆ ತರಬೇಕು; ಆಗ ಗೌರವ ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಅವರು ತಿಳಿಸಿದರು.

ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಇಂದು ನಡೆದ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಪ್ರಶಿಕ್ಷಣ ವರ್ಗದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯತಿ ಸದಸ್ಯರು ಬಹುತೇಕ ನಿರ್ಣಾಯಕ ಮತ್ತು ಸ್ಥಳೀಯ ಶಕ್ತಿ. ಗ್ರಾಮ ಪಂಚಾಯತಿಯು ವಿಧಾನ ಪರಿಷತ್, ವಿಧಾನಸಭೆಗೆ ಹೆಬ್ಬಾಗಿಲು ಇದ್ದಂತೆ. ವಿಧಾನ ಪರಿಷತ್ ಪ್ರವೇಶಿಸಲು ಇಚ್ಛೆ ಇರುವವರೇ ಹೆಚ್ಚಾಗಿ ಗ್ರಾಮ ಪಂಚಾಯತಿಗಳನ್ನು ಪ್ರವೇಶಿಸುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಇಂಥವರಿದ್ದಾರೆ. ಕೇವಲ ನಮ್ಮ ಪಕ್ಷದಲ್ಲಿ ಅಲ್ಲ ಎಂದು ಅವರು ನುಡಿದರು.

Elected Representatives gets Respect from utilisation of Power - BJP Leader BL Santosh

ದೇಶದಲ್ಲಿ ಚೆಕ್ ಗೆ ಸಹಿ ಮಾಡುವ ಅಧಿಕಾರವನ್ನು ಕೇವಲ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಬೇರೆ ಯಾವ ಜನಪ್ರತಿನಿಧಿಗಳಿಗೆ ಇಲ್ಲ ಎಂದು ಅವರು ವಿವರಿಸಿದರು.

ಕಾಂಗ್ರೆಸ್ ನಮ್ಮ ಯೋಚನಾ ಶಕ್ತಿಯನ್ನೇ ಹಾಳು ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಪಕ್ಷಪಾತ ಎಲ್ಲರಿಗೂ ತಿಳಿದಿದೆ. ಅದು ಚುನಾಯಿತ ಪ್ರತಿನಿಧಿಗಳ ಯೋಚನಾ ಶಕ್ತಿಯನ್ನೇ ಹಾಳು ಮಾಡಿ, ಅವರ ದಿಕ್ಸೂಚಿಯನ್ನೇ ಬದಲಾಯಿಸಿದ್ದು ದುರಂತ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರ ಅನ್ನೋದು ಯಾವ ದೆಹಲಿ ನಾಯಕರಿಗೂ ಇಲ್ಲ, ಅಧಿಕಾರ ಅನ್ನೋದೆ ಸೇವೆ ಮಾಡಲಿಕ್ಕೆ, ಒಂದು ಮೈಕ್ ಮೂಲಕ ನೀರು ಬರುವುದನ್ನು ಜನರಿಗೆ ತಿಳಿಸಬಹುದು, ಜನಸಾಮಾನ್ಯರಿಗೆ ಹತ್ತಿರದಿಂದ ಸಮಸ್ಯೆ ನೋಡಲು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಲು ಉತ್ತಮ ವೇದಿಕೆ ಅಗಲಿದೆ, ಅದನ್ನ ಒಳ್ಳೆಯದಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಗಾಂಧಿಯವರ ಗ್ರಾಮ ಸ್ವರಾಜ್ಯ ಚಿಂತನೆಯನ್ನು ಪಂಡಿತ್ ದೀನದಯಾಳ್ ಅಂತ್ಯೋದಯ ಎಂದರು, ಸರ್ವೋದಯ ಎಂದರೂ ಅದೇ ಆಗಿದೆ. ಗ್ರಾಮ ಪಂಚಾಯತಿಗಳು ಉತ್ತಮ ಗುಣಮಟ್ಟ ನೀಡಿ ಸಮಾಜದ ಮುಖ್ಯವಾಹಿನಿಗೆ ಜನರನ್ನು ತರುವುದೇ ಎಲ್ಲರ ಉದ್ದೇಶ ಎಂದು ವಿವರಿಸಿದರು.

ಗ್ರಾಮ ಪಂಚಾಯತಿಗಳಲ್ಲಿ ಹೈನುಗಾರಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗೆ ಉತ್ತೇಜನ ಕೊಡಬೇಕು. ಸ್ಥಳೀಯ ಉತ್ಪಾದನೆ, ಸ್ಥಳೀಯ ಉತ್ತೇಜನಕ್ಕೆ ಗ್ರಾಮ ಪಂಚಾಯತಿ ಸದಸ್ಯರು ಸ್ವಯಂ ಪ್ರೇರಿತ ನಿರ್ಧಾರಗಳು ಕೈಗೊಳ್ಳಬೇಕು ಎಂದು ತಿಳಿಸಿದರು.

ಎಲ್ಲರಿಗೂ ಸರ್ಕಾರಿ ಕೆಲಸ ಬೇಕು, ಆದರೆ ಯಾರೂ ಹಳ್ಳಿಗಳಲ್ಲಿ ಕೆಲಸ ಮಾಡಲಿಕ್ಕೆ ಇಷ್ಟ ಇಲ್ಲ, ನಗರ ಪ್ರದೇಶಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಶಿಕ್ಷಕರು ಇಲ್ಲದೆ ಸೊರಗಿ ಹೋಗುತ್ತಿವೆ. ಹಳ್ಳಿಗಳಿಗೆ ಹೆಚ್ಚಿನ ಸೌಕರ್ಯ ಕೊಟ್ಟಾಗ ಜನರು ನಗರಗಳತ್ತ ಬರುವುದು ಕಡಿಮೆಯಾಗುತ್ತದೆ ಎಂದರು.

ನಿಮಗಿಂತ ಮೊದಲು ಗ್ರಾಮ ಪಂಚಾಯತಿ ಇತ್ತು. ಆಗಲೂ ಕಾಮಗಾರಿಗಳು ಆಗಿವೆ. ಸ್ವಾತಂತ್ರ್ಯ ಬಂದಾಗಿಂದ ಕಾಮಗಾರಿಗಳು ಆಗಿವೆ, ಆದ್ರೂ ಇನ್ನೂ ಕೊಳಗೇರಿಗಳಿವೆ, ಹಿಂದುಳಿದ ಗ್ರಾಮಗಳಿವೆ. ನಮ್ಮ ಕೆಲಸಗಳಿಂದ ನಮ್ಮನ್ನು ಗುರುತಿಸುವಂತೆ ಆಗಬೇಕಿತ್ತು. 30 ವರ್ಷಗಳು ಕಳೆದರೂ ಅಬ್ದುಲ್ ನಜೀರ್ ಸಾಬ್ ಅಥವಾ ನೀರ್ ಸಾಬ್ ಯಾರಿಗೆ ಗೊತ್ತಿಲ್ಲ ಹೇಳಿ, ಹಾಗೆ ನಮ್ಮ ಕೆಲಸ ನಮ್ಮ ಗುರುತು ಆಗಬೇಕು ಎಂದರು.

ಗ್ರಾಮ ಪಂಚಾಯತಿಗಳು ದೇಶದ ಅಭಿವೃದ್ಧಿಗೆ ದಾರಿ ದೀಪ, ಮತದಾರರಿಗೆ ಸುಲಭವಾಗಿ ತಲುಪಬಹುದಾದ ಏಕೈಕ ವೇದಿಕೆ. ಜನರಿಗೆ ಒಳ್ಳೆಯದನ್ನು ಮಾಡುವ ಜವಾಬ್ದಾರಿ ಜನರಿಂದ ಆಯ್ಕೆಯಾದ ನಮ್ಮ ಮೇಲೆ ಇದೆ. ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾದ್ಯ, ಆರ್ಥಿಕ, ಸಾಮಾಜಿಕ, ಭೌತಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಗ್ರಾಮದ ಸಾಕ್ಷರತೆ, ಆರ್ಥಿಕ ಬೆಳವಣಿಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಿ.ಡಿ.ಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ರಾಜ್ಯದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ್, ಮುಖಂಡರಾದ ಕಡತನಮಲೆ ಸತೀಶ್, ಹನುಮೇಗೌಡ ಸೇರಿ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here