ಬೆಂಗಳೂರು:
ಶಾಸಕ ಅರವಿಂದ್ ಬೆಲ್ಲದ್ ಇದೀಗ ಫೋನ್ ಕದ್ಧಾಲಿಕೆಯ ಆರೋಪ ಮಾಡಿದ್ದಾರೆ. ನನ್ನ ಫೋನ್ ಟ್ಯಾಪ್ ಆಗಿದೆ. ನನ್ನನ್ನ ಫಾಲೋ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.
ಕುಮಾರಕೃಪಾ ಗೆಸ್ಟ್ಹೌಸ್ ಬಳಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಕಳೆದ ಒಂದು ತಿಂಗಳಿನಿಂದ ನನ್ನ ಫೋನ್ ಟ್ಯಾಪ್ ಆಗುತ್ತಿದೆ. ನನಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಯಾರೆಂದು ಕೇಳಿದಾಗ ಯುವರಾಜ ಸ್ವಾಮಿ ಎಂದು ಹೇಳಿಕೊಂಡರು. ನನಗೇಕೋ ಈ ಕರೆ ಸರಿ ಎನಿಸದ ಕಾರಣ ನಾನು ಕರೆಯನ್ನ ಕಟ್ ಮಾಡಿದೆ.
![ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ಧಾಲಿಕೆಯ ಆರೋಪ 1 Arvind Bellad letter to Karnatakas speaker](https://kannada.thebengalurulive.com/wp-content/uploads/2021/06/Arvind-Bellad-letter-to-Karnatakas-speaker.jpg)
ಈ ಕುರಿತು ತನಿಖೆ ನಡೆಸಿ, ರಾಜಕೀಯವಾಗಿ ಅಥವಾ ಇನ್ಯಾವುದೇ ಉದ್ದೇಶದಿಂದ ನನ್ನ ಹೆಸರಿಗೆ ಚ್ಯುತಿ ಬರುವಂತೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಪತ್ತೆ ಹಚ್ಚಿ, ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಾನ್ಯ ವಿಧಾನಸಭಾ ಸಭಾಧ್ಯಕ್ಷರು ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದೇನೆ.
— Arvind Bellad (@BelladArvind) June 17, 2021
ಆದರೆ ಈ ಘಟನೆ ನಡೆದು ಮೂರ್ನಾಲ್ಕು ದಿನಗಳ ಬಳಿಕ ನನ್ನ ಮೊಬೈಲ್ ಗೆ ಮತ್ತೊಮ್ಮೆ ಕರೆ ಬಂದಿತ್ತು. ಆಗಲೂ ಸಹ ತಾನು ಯುವರಾಜ ಸ್ವಾಮಿ ಎಂದು ಹೇಳಿಕೊಂಡ ವ್ಯಕ್ತಿ, ನನ್ನನ್ನ ಅನವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ. ನನಗೆ ಸಹಾಯ ಮಾಡಿ ಎಂದಿದ್ದರು. ಆದರೆ ಈ ಕರೆಯ ಹಿಂದೆ ನನ್ನ ವಿರುದ್ಧ ದೊಡ್ಡ ಪಿತೂರಿಯೇ ಇದೆ. ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದೇನೆ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.