Home ಬೆಂಗಳೂರು ನಗರ 100 ಘಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ ಮಹತ್ವದ 4 ಸುಧಾರಣೆಗಳು : ತೇಜಸ್ವೀ ಸೂರ್ಯ

100 ಘಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ ಮಹತ್ವದ 4 ಸುಧಾರಣೆಗಳು : ತೇಜಸ್ವೀ ಸೂರ್ಯ

109
0

ಬೆಡ್ ಹಂಚಿಕೆ ಕುರಿತು ರೋಗಿಗಳಿಗೆ ನೇರವಾಗಿ ಎಸ್.ಎಂ.ಎಸ್ ಮಾಹಿತಿ ರವಾನೆ ಪದ್ಧತಿ ಜಾರಿಗೆ; ಮ್ಯಾನುವಲ್ ಅನ್ ಬ್ಲಾಕಿಂಗ್ ಪದ್ಧತಿ ನಿಷ್ಕ್ರಿಯ

ಬೆಂಗಳೂರು:

ಬಿಬಿಎಂಪಿ ಬೆಡ್ ಹಂಚಿಕೆ ಪದ್ಧತಿಯಲ್ಲಿ ಹಲವು ಸುಧಾರಣೆಗಳಿಗೆ ಕೋರಿ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಕ್ಷಿಪ್ರಗತಿಯಲ್ಲಿ 4 ಮಹತ್ತರ ಸುಧಾರಣೆಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿದ್ದು, ಈ ಕುರಿತು ತಾಂತ್ರಿಕ ತಂಡಕ್ಕೆ 100 ಘಂಟೆಗಳ ಗುರಿ ನಿಗದಿ ಮಾಡಲಾಗಿತ್ತು ಎನ್ನುವುದನ್ನು ಸಂಸದ ತೇಜಸ್ವೀ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಸೇವೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ತಂತ್ರಜ್ಞರನ್ನು ಒಳಗೊಂಡ ತಂಡಗಳ ಜೊತೆಗೆ ಹಲವು ಸುತ್ತಿನ ಮ್ಯಾರಥಾನ್ ಸಭೆಗಳ ನಂತರ 4 ಸುಧಾರಣೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಸಂಸದರು ತಿಳಿಸಿದರು.

a) ಬೆಡ್ ಹಂಚಿಕೆ ಕುರಿತಂತೆ ರೋಗಿಗಳಿಗೆ ನೇರ ಎಸ್.ಎಂ.ಎಸ್ ರವಾನೆ.
b) ಬೆಡ್ ಬುಕಿಂಗ್ ಪದ್ಧತಿಯಲ್ಲಿ ಈ ಮುಂಚೆ ಜಾರಿಯಲ್ಲಿದ್ದ ಮ್ಯಾನುವಲ್ ಅನ್ ಬ್ಲಾಕ್ ವಿಧಾನ ನಿಷ್ಕಿಯ.
c) ಬೆಡ್ ಬುಕಿಂಗ್ ನಂತರ 10 ಘಂಟೆಗಳ ವರೆಗೆ ನೀಡಲಾಗಿದ್ದ ಅವಧಿಯನ್ನು 4 ಘಂಟೆಗೆ ಕಡಿತಗೊಳಿಸುವಿಕೆ.
d) ಬೆಡ್ ಹಂಚಿಕೆ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ದೃಢೀಕರಣ.

ಈ ಸುಧಾರಣೆಗಳನ್ನು ತತ್‌ ಕ್ಷಣಕ್ಕೆ ಕಾರ್ಯರೂಪಕ್ಕೆ ಈಗಾಗಲೇ ಜಾರಿಗೆ ತರಲಾಗಿದ್ದು, ಬೆಡ್ ಹಂಚಿಕೆಗೆ ಡಿಜಿಟಲ್ ಸರದಿ ಪದ್ಧತಿ, ರಿಸರ್ವೇಷನ್ ನಲ್ಲಿ ಆಗುತ್ತಿರುವ ಸಮಯಮಿತಿ ಕಡಿತಗೊಳಿಸುವಿಕೆ ಹಾಗೂ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ನೋಂದಣಿ /ಡಿಸ್ಚಾರ್ಜ್‌ ಸೇರಿದಂತೆ ಹಲವು ಸುಧಾರಣೆಗಳು ಮುಂದಿನ ಕೆಲವು ಘಂಟೆಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಸಂಸದರು ಇದೇ ಸಂದರ್ಭದಲ್ಲಿ ವಿವರಿಸಿದರು.

“ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕ್ಷಿಪ್ರ ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಕಾರ್ಯವೈಖರಿಯನ್ನು ನಾನು ಈ ಸಂದರ್ಭದಲ್ಲಿ ಶ್ಲಾಘಿಸುತ್ತೇನೆ. ಈ ಕುರಿತು ನಂದನ್ ನಿಲೇಕಣಿ ಯವರನ್ನು ಸಂಪರ್ಕಿಸಿ, ಬಿಬಿಎಂಪಿ ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ತಾಂತ್ರಿಕ ಸಹಾಯ ಕೋರಿ ಮನವಿ ಸಲ್ಲಿಸಿದ ತಕ್ಷಣ, ತ್ವರಿತವಾಗಿ ಸ್ಪಂದಿಸಿ ಪರಿಣಿತರ ತಂಡವನ್ನು ಇದಕ್ಕೋಸ್ಕರವೇ ನಿಯೋಜನೆಗೊಳಿಸಿ ಸಹಕಾರ ನೀಡಿರುವುದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪರಿಣಿತರ ತಂಡವು ISpirtನ ಥಿಂಕ್ ಟ್ಯಾಂಕ್ ಸಹಯೋಗದೊಂದಿಗೆ ಕೆಲವು ಸಭೆಗಳು, ಸಲಹೆ/ಸೂಚನೆಗಳ ನಂತರ ಕೇವಲ 100 ಘಂಟೆಗಳ ಅವಧಿಯಲ್ಲಿ ಬೆಡ್ ಹಂಚಿಕೆ ವಿಧಾನದಲ್ಲಿದ್ದ ಹಲವು ಲೋಪದೋಷಗಳನ್ನು ಸರಿಪಡಿಸಿ, ಇದನ್ನು ಕಾರ್ಯರೂಪಕ್ಕೆ ತಂದಿದ್ದು, ಕ್ಷಿಪ್ರ ಕಾರ್ಯನಿರ್ವಣೆಗೆ ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ಈ ಹಿಂದೆ ರೋಗಿಗಳ ಗಮನಕ್ಕೆ ತರದೇ ಆಗುತ್ತಿದ್ದ ಬೆಡ್ ಹಂಚಿಕೆಯನ್ನು ತಡೆಗಟ್ಟಲು ಬೆಡ್ ಹಂಚಿಕೆ ಕುರಿತಾದ ಎಸ್.ಎಂ.ಎಸ್ ಅನ್ನು ನೇರ ರೋಗಿಗಳ ದೂರವಾಣಿ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಗಮನಾರ್ಹ ಬೆಳವಣಿಗೆ” ಎಂದು ಸಂಸದರು ಇದೇ ಸಂದರ್ಭದಲ್ಲಿ ವಿವರಿಸಿದರು.

ಇನ್ನೊಂದು ಮಹತ್ವದ ಸಂಗತಿಯೆಂದರೆ, ವಾರ್ ರೂಮ್ ಗಳಲ್ಲಿ ಬೆಡ್ ಹಂಚಿಕೆ ಸಮಯದಲ್ಲಿ ಆಗುತ್ತಿದ್ದ ಅಪಸವ್ಯಗಳನ್ನು ತಡೆಗಟ್ಟಲು, ಈ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ಧೃಢೀಕರಣ ಕಡ್ಡಾಯಗೊಳಿಸಲು ಸೂಚಿಸಲಾಗಿದ್ದು, ಇದರಿಂದ ಪ್ರತೀ ಬೆಡ್ ಬುಕಿಂಗ್ ಗೂ ಕೂಡ ಹೊಣೆಗಾರಿಕೆ ದೊರೆತಂತಾಗುವುದರಿಂದ ಬೆಡ್ ಹಂಚಿಕೆಯಲ್ಲಿ ಅನವಶ್ಯಕ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ” ಎಂದು ತೇಜಸ್ವೀ ಸೂರ್ಯ ತಿಳಿಸಿದರು.

“ಬಿಬಿಎಂಪಿ ಸೇರಿದಂತೆ ವಲಯವಾರು ಸಹಾಯವಾಣಿಗಳಿಗೆ ಕರೆ ಮಾಡುವ ರೋಗಿಗಳ ವಿವರಗಳನ್ನು ಲೆಡ್ಜರ್ (ಲಿಖಿತ ಟಿಪ್ಪಣಿ) ಸೇರಿದಂತೆ ಇತರ ವಿಧಗಳಲ್ಲಿ ನೋಟ್ ಮಾಡಿಕೊಳ್ಳುವ ವಿಧಾನವಿತ್ತು. ಈ ವಿಧವು ಪಾರದರ್ಶಕತೆಗೆ ಒಳಗೊಂಡಿರದೆ, ಹಲವು ಹಸ್ತಕ್ಷೇಪಗಳಿಗೆ ಕಾರಣವಾಗಿತ್ತು.ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿ.ಎಚ್.ಬಿ.ಎಂ.ಎಸ್ ವೆಬ್ ಸೈಟ್ ನಲ್ಲಿ ಡಿಜಿಟಲ್ ಸರದಿ ಪದ್ಧತಿಯನ್ನು ಜಾರಿಗೆ ತರಲಾಗಿದ್ದು, ರೋಗಿಗಳ ತುರ್ತು ಅಗತ್ಯತೆ ಮೇರೆಗೆ ಬೆಡ್ ಹಂಚಿಕೆ ಮಾಡಲು ಆದ್ಯತೆ ಒದಗಿಸಲಾಗಿದ್ದು, ಇದರಿಂದ ಪಾರದರ್ಶಕತೆಗೆ ದಾರಿ ಮಾಡಿಕೊಟ್ಟಂತಾಗಿದೆ. ಡ್ಯಾಶ್ ಬೋರ್ಡ್ ಮೂಲಕ ಬೆಡ್ ಹಂಚಿಕೆಗೆ ಸಂಬಂಧಿಸಿದ ಹಲವು ವಿವರಗಳನ್ನು ಸಾರ್ವಜನಿಕರ ಅವಗಾಹನೆಗೆ ತಿಳಿಸುವ ವ್ಯವಸ್ಥೆಗೆ ಸೂಚಿಸಲಾಗಿದ್ದು, ಇದರ ವಿವರಗಳನ್ನು ನೇರವಾಗಿ ರೋಗಿಗಳ ಮೊಬೈಲ್ ಸಂಖ್ಯೆಗೆ ತಿಳಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ” ಎಂದು ಸಂಸದರು ವಿವರಿಸಿದರು.

ಆಸ್ಪತ್ರೆಗಳಲ್ಲಿ ರಿಜಿಸ್ಟ್ರೇಷನ್ ಹಾಗೂ ಡಿಸ್ಚಾರ್ಜ್ ಗೆ ಸಂಬಂಧಿಸಿದ ಮಾಹಿತಿಯನ್ನು ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಆಧಾರಿತ ನೋಂದಣಿಗೆ ಸೂಚಿಸಲಾಗಿದ್ದು, ಇದರಿಂದ ನಕಲಿ ಪ್ರವೇಶಗಳಿಗೆ ಆಸ್ಪದವಿಲ್ಲ. ಪ್ರಸ್ತುತ ಕೋವಿಡ್ ನಿರ್ವಹಣೆಗೆ 3 ಸಾಫ್ಟ್ ವೇರ್ ( INDEX, C.H.B.M.S &SAST) ಗಳಿದ್ದು, ಇವುಗಳಲ್ಲಿನ ಯಾವುದಾದರೂ ಒಂದು ಸಾಫ್ಟ್ ವೇರ್ ಕಾರ್ಯನಿರ್ವಹಿಸದಿದ್ದರೆ ಉಳಿದವುಗಳ ನಿರ್ವಹಣೆ ಸಮರ್ಪಕವಾಗಿರದು. ಇವೆಲ್ಲವುಗಳನ್ನು ಸಂಯೋಜನೆಗೊಳಿಸಿ ಏಕೀಕೃತ ಸಾಫ್ಟ್ ವೇರ್ ಅಭಿವೃದ್ಧಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲಿಯೇ ಇವುಗಳನ್ನು ಸಹ ಕಾರ್ಯಾಚರಣೆಗೆ ತರಲಾಗುವುದು” ಎಂದು ಸಂಸದ ತೇಜಸ್ವೀ ಸೂರ್ಯ ತಿಳಿಸಿದರು.

LEAVE A REPLY

Please enter your comment!
Please enter your name here