Home ರಾಜಕೀಯ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ; ಲಕ್ಷ್ಮಣ ಸವದಿ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ; ಲಕ್ಷ್ಮಣ ಸವದಿ

22
0

ಬೆಂಗಳೂರು:

ಸಾರಿಗೆ ನೌಕರರ ನವೆಂಬರ್ ವರೆಗಿನ ಎಲ್ಲಾ ವೇತನ ಬಿಡುಗಡೆ ಮಾಡಲಾಗಿದೆ. ಸಾರಿಗೆ ಇಲಾಖೆಯ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಈಗ ಇಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಬಿ. ಹರ್ಷವರ್ಧನ್, ಕಳೆದ 3-4 ತಿಂಗಳಿಂದ ಸಾರಿಗೆ ನೌಕರರಿಗೆ ವೇತನ ನೀಡಿಲ್ಲ ಎಂಬ ಆರೋಪವಿದೆ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ಇಲಾಖೆಯ 1.30 ಲಕ್ಷ ನೌಕರರ ನವೆಂಬರ್ ವರೆಗಿನ ವೇತನವನ್ನು ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ 4 ನಿಗಮಗಳು ಸಂಕಷ್ಟದಲ್ಲಿದ್ದಾಗ ನೌಕರರ ವೇತನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆವು, ಅದರಂತೆ ಮುಖ್ಯಮಂತ್ರಿ ಹಣಕಾಸು ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಅದರಂತೆ ಹಣಕಾಸು ಇಲಾಖೆ 7 ತಿಂಗಳ ಸಂಬಳವನ್ನು ನೀಡಿದೆ. 2 ತಿಂಗಳ ವೇತನ ಶೇಕಡಾ 100ರಷ್ಟು, 4 ತಿಂಗಳ ವೇತನ 25-75ರ ಅನುಪಾತದಲ್ಲಿ, ಮತ್ತೆ ಎರಡು ತಿಂಗಳ ವೇತನ 50-50 ಅನುಪಾತದಲ್ಲಿ ಸರ್ಕಾರ ಕೊಟ್ಟಿದೆ. ನವೆಂಬರ್ ವರೆಗೆ ಎಲ್ಲರ ವೇತನ ನೀಡಲಾಗಿದೆ, ಡಿಸೆಂಬರ್ ತಿಂಗಳ ವೇತನ 8-10 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಯಾರಿಗೂ ವೇತನ ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದರು.

1.25 ಲಕ್ಷ ನೌಕರರನ್ನು ಸರ್ಕಾರಿ ನೌಕರಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ನಾಳೆ ಅವರು ಧರಣಿ ನಡೆಸುತ್ತಿದ್ದಾರೆ, ಅವರನ್ನು ಕರೆದು ಮಾತುಕತೆ ಮಾಡಿ ಎಂದು ಸದಸ್ಯ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ಈ ಹಿಂದೆ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದಾಗ, ಸ್ವತಃ ತಾವು ಅಲ್ಲಿಗೆ ಭೇಟಿ ನೀಡಿ ಮನವಿ ಸ್ವೀಕರಿಸಿದ್ದ, ಕೋವಿಡ್ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆ ಇರುವುದರಿಂದ ಈಗ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಿರ್ಣಯ ಮಾಡುತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದರೆ, ಉಳಿದ ನಿಗಮಗಳಲ್ಲಿ ಅನೇಕ ಮಂದಿ ಇದೇ ಬೇಡಿಕೆ ಇಡಬಹುದು. ಆದ್ದರಿಂದ ಸದ್ಯಕ್ಕೆ ಸರ್ಕಾರದ ಮುಂದೆ ಅವರನ್ನು ಸರ್ಕಾರಿ ನೌಕರರಾಗಿ ಮಾಡುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here